ಬೇಲೂರು: ವಿಶ್ವವಿಖ್ಯಾತ ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವ ಹಾಗೂ ಏಳು ದಿನಗಳ ಕಾಲ ನಡೆಯುವ ಉತ್ಸವಗಳಲ್ಲಿ ಪಾಲ್ಗೊಳ್ಳಲು ಐದು ವರ್ಷಕ್ಕೊಮ್ಮೆ ಕಡೂರು ತಾಲೂಕಿನ ಚಿಕ್ಕಬಾಸೂರ ಗ್ರಾಮದಿಂದ 2 ಸಾವಿರಕ್ಕೂ ಹೆಚ್ಚು ಭಕ್ತರು ವಿವಿಧ ವಾಹನಗಳಲ್ಲಿ ಆಗಮಿಸಿದ್ದು ಚನ್ನಕೇಶವ ಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿಯವರು ಸಂತೆ ಮೈದಾನದಲ್ಲಿ ತಂಗಲು ಮೂಲಭೂತ ಸೌಕರ್ಯ ಗಳನ್ನು ಕಲ್ಪಿಸಿರುವ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರತಿ ವರ್ಷ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಚಿಕ್ಕ ಬಾಸುರ ಗ್ರಾಮದಿಂದ ಎರಡು ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಚನ್ನಕೇಶವನ ರಥೋತ್ಸವಕ್ಕೆ ಆಗಮಿಸುತ್ತಾರೆ. ತಾತ ಮುತ್ತಾತನ ಕಾಲದಿಂದಲೂ ಈ ಗ್ರಾಮದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಳ್ಳುವುದು ವಾಡಿಕೆಯಾಗಿ ಬೆಳೆದು ಬಂದಿದೆ. ೨೦ ವರ್ಷದ ಹಿಂದೆ ನೂರಾರು ಎತ್ತಿನ ಗಾಡಿಗಳ ಮೂಲಕ ಆಗಮಿಸಿ ಗುಂಡು ತೋಪಿನಲ್ಲಿ ತಂಗುತ್ತಿದ್ದರು. ಆದರೆ ಕಾಲ ಬದಲಾದಂತೆ ಇತ್ತೀಚಿನ ವರ್ಷಗಳಲ್ಲಿ ಟ್ರ್ಯಾಕ್ಟರ್ ಜೀಪು ಕಾರುಗಳಲ್ಲಿ ಬರುತ್ತಿದ್ದಾರೆ. ಏಳು ದಿನಗಳ ಕಾಲ ಚೆನ್ನಕೇಶವನ ಜಾತ್ರಾ ಉತ್ಸವಗಳಲ್ಲಿ ಪಾಲ್ಗೊಳ್ಳುತ್ತಾರೆ. ಚನ್ನಕೇಶವ ದೇಗುಲ ವ್ಯವಸ್ಥಾಪನ ಸಮಿತಿಯಿಂದ ಪಟ್ಟಣದ ಮೂಡಿಗೆರೆ ರಸ್ತೆಯಲ್ಲಿರುವ ಸಂತೆ ಮೈದಾನದಲ್ಲಿ ಇವರಿಗೆ ತಂಗಲು ವ್ಯವಸ್ಥೆ ಮಾಡಿ ಕೊಡುವುದರ ಜೊತೆಗೆ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ.
ಈ ಬಗ್ಗೆ ಚಿಕ್ಕಬಾಸುರ ಗ್ರಾಮಸ್ಥರು ಮಾತನಾಡಿ, ಕಳೆದ ಬಾರಿಗಿಂತ ಈ ಬಾರಿ ವ್ಯವಸ್ಥೆಗಳೆಲ್ಲವೂ ಚೆನ್ನಾಗಿದೆ. ಕುಡಿಯುವ ನೀರು, ಶೌಚಾಲಯ, ಸ್ನಾನ ಗೃಹ, ಹಾಗೂ ರಾತ್ರಿ ವೇಳೆ ವಿದ್ಯುತ್ ದ್ವೀಪದ ವ್ಯವಸ್ಥೆಯನ್ನು ಕಲ್ಪಿಸಿರುತ್ತಾರೆ. ನಾವು ಐದು ವರ್ಷಕ್ಕೊಮ್ಮೆ ಚೆನ್ನಕೇಶವನ ಜಾತ್ರೆಯಲ್ಲಿ ಪಾಲ್ಗೊಳ್ಳಲು ಬರುತ್ತೇವೆ. ನಾವು ಚನ್ನಕೇಶವನ ಒಕ್ಕಲಾಗಿದ್ದು ಎಲ್ಲಾ ಗ್ರಾಮಸ್ಥರು ಒಗ್ಗೂಡಿ ಬರುವುದು ವಿಶೇಷ ಎಂದರು.
ಚನ್ನಕೇಶವ ಸ್ವಾಮಿ ಸಮಿತಿಯ ಅಧ್ಯಕ್ಷ ನಾರಾಯಣಸ್ವಾಮಿ ಹಾಗೂ ಕಾರ್ಯನಿರ್ವಹಣಾ ಅಧಿಕಾರಿ ಆರ್ ವಿದ್ಯುಲ್ಲತಾ ಮಾತನಾಡಿ, ಕಡೂರು ತಾಲೂಕು ಚಿಕ್ಕ ಬಾಸೂರ ಗ್ರಾಮದಿಂದ ಚನ್ನಕೇಶವನ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅವರಿಗೆ ಈ ಬಾರಿ ಸಂತೆ ನಡೆಯುವ ಜಾಗದಲ್ಲಿ ವ್ಯವಸ್ಥೆ ಮಾಡಿದ್ದು, ಅಗತ್ಯ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಸ್ನಾನ ಗೃಹ, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಕಲ್ಪಿಸಿದ್ದು ಏಳು ದಿನಗಳ ಕಾಲ ಅವರಿಗೆ ಯಾವುದಕ್ಕೂ ಲೋಪವಾಗದಂತೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.