ಹಾಸನ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಲ್ಲಿ ಜನರು ಹಣಕ್ಕೆ ಬೆಲೆ ಕೊಡದೆ ಸ್ವಾಭಿಮಾನಿಗಳಾಗಿ ಜೆಡಿಎಸ್ ಪಕ್ಷಕ್ಕೆ ಬೆಂಬಲಿಸಲಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಎಚ್.ಪಿ ಸ್ವರೂಪ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದ ಬಿಜೆಪಿ ಶಾಸಕರ ಯಾವುದೇ ಹಣದ ಆಮಿಷಕ್ಕೆ ಕ್ಷೇತ್ರದ ಜನರು ಮರುಳಾಗುವುದಿಲ್ಲ. ಚುನಾವಣೆ ಬಂದಾಗ ಮಾತ್ರ ಅಷ್ಟಲಕ್ಷ್ಮಿ ಪೂಜೆ ಹಾಗೂ ಇತರೆ ಕಾರ್ಯಕ್ರಮಗಳು ಅವರಿಗೆ ನೆನಪಾಗುತ್ತದೆ ಎಂದು ದೂರಿದರು. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆಯೂ ಹನುಮಗೌಡರು, ಕರಿ ಗೌಡರು, ನಮ್ಮ ತಂದೆ ಪ್ರಕಾಶ್ ಅವರು ಹಣದಿಂದ ಚುನಾವಣೆಯಲ್ಲಿ ಗೆಲುವು ಸಾಧಿಸದೆ ಸ್ವಾಭಿಮಾನದಿಂದ ಗೆಲುವು ಪಡೆದಿದ್ದಾರೆ. ಈ ಬಾರಿಯೂ ಅಂತಹದೇ ಫಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಬಾರಿಯ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪಂಚರತ್ನ ಯಾತ್ರೆ ಹಾಗೂ ಐದು ಕಾರ್ಯಕ್ರಮಗಳ ಅನುಷ್ಠಾನ ಮತ್ತು ಜಿಲ್ಲೆಯಲ್ಲಿ ಮಾಜಿ ಸಚಿವ ಎಚ್ ಡಿ ರೇವಣ್ಣ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಮತಯಾಚನೆ ಮಾಡಲಾಗುವುದು ಎಂದು ಸ್ವರೂಪ್ ತಿಳಿಸಿದರು.
ಮುಂದೆ ಚುನಾವಣೆಯಲ್ಲಿ ಗೆದ್ದರೆ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಕೈಗಾರಿಕೆ, ಶಿಕ್ಷಣ, ನೀರಾವರಿ ಸೇರಿದಂತೆ ಚನ್ನಪಟ್ಟಣ ಕೆರೆ ಅಂಗಳದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುವುದು ಎಂದು ಸ್ವರೂಪ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ ಒಕ್ಕಲಿಗರ ಸಂಘದ ನಿರ್ದೇಶಕ ರಘು ಗೌಡ, ಜೆಡಿಎಸ್ ಮಾಧ್ಯಮ ವಕ್ತಾರ ರಘು ಹೊಂಗೆರೆ, ಅನಿಲ್ ಕುಮಾರ್ ಇದ್ದರು.
ಕೃತಜ್ಞತೆ ಸಲ್ಲಿಸುವೆ
ರ್ಯಾಲಿಯಲ್ಲಿ ನಿರೀಕ್ಷೆಗೂ ಮೀರಿ ಜನರು ಆಗಮಿಸಿದ್ದರು. ಅಲ್ಲದೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ, ಭವಾನಿ ರೇವಣ್ಣ ಸೇರಿದಂತೆ ಸೂರಜ್ ರೇವಣ್ಣ ಮತ್ತು ಪ್ರಜ್ವಲ್ ಸಾಥ್ ನೀಡಿದರು. ಪಕ್ಷದ ಮೇಲೆ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರ ಪಂಚರತ್ನ ಕಾರ್ಯಕ್ರಮವನ್ನು ನಂಬಿ ಬಂದಂತಹ ಸಾವಿರಾರು ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಶಾಸಕರಿಗೆ ಭಯ ಹುಟ್ಟಿದೆ
ಜೆಡಿಎಸ್ ರ್ಯಾಲಿ ನೋಡಿ ಪ್ರೀತಮ್ ಗೌಡ ಅವರಿಗೆ ಭಯ ಹುಟ್ಟಿದೆ, ಆದ್ದರಿಂದ ಇನ್ನು ಮುಂದೆ ಯಾವುದೇ ರೀತಿಯ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆ 50 ಸಾವಿರ ಅಂತರದಲ್ಲಿ ಹಾಗೂ ಒಂದು ಲಕ್ಷ ಮತಗಳಿಂದ ಗೆಲುವು ಪಡೆಯುವೆ ಎಂದಿದ್ದರು, ರ್ಯಾಲಿ ವೇಳೆ ಜನರಿಗೆ ಪ್ರಚೋದಿಸುವ ಕೆಲಸ ಮಾಡಿದ್ದಾರೆ. ಅವರ ದುರಹಂಕಾರ ಮಾತುಗಳನ್ನು ಜನರು ಗಮನಿಸುತ್ತಿದ್ದಾರೆ. ಆದ್ದರಿಂದ ವಿರೋಧ ಪಕ್ಷದ ನಾಯಕರ ವಿರುದ್ಧ ಮಾತನಾಡೊಲ್ಲ ಎಂದು ಸುಮ್ಮನಾಗಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಪರ ಪ್ರಚಾರ; ಬಿಇಒ ವರ್ಗಾವಣೆಗೆ ಒತ್ತಾಯ
ಹಾಸನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಇಓ ಬಲರಾಮ್ ಅವರು ಬಿಜೆಪಿ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದು ಇವರನ್ನು ವರ್ಗಾವಣೆ ಮಾಡುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಸ್ವರೂಪ್ ತಿಳಿಸಿದರು. ಬಲರಾಮ ಅವರು ಶಿಕ್ಷಕರ ಮೇಲೆ ಪ್ರಭಾವ ಬೀರುವ ಮೂಲಕ ಅಂಚೆ ಮತದಾನದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಬಲರಾಮ್ ಅವರ ಸಹೋದರಿ ಸಹ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಇವರ ಮೂಲಕವೂ ಶಿಕ್ಷಕರ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಅವರಿಗೆ ಊಟ ಉಪಚಾರ ವ್ಯವಸ್ಥೆ ಮಾಡುತ್ತಾ ಮತದಾರರ ಮೇಲೆ ಆಮಿಷ ಓಡ್ಡುತ್ತಿದ್ದಾರೆ.
ಆದ್ದರಿಂದ ಅವರನ್ನು ವರ್ಗಾವಣೆ ಮಾಡುವಂತೆ ಏಪ್ರಿಲ್ 9ರಂದು ಜಿಲ್ಲಾ ಚುನಾವಣಾಧಿಕಾರಿಗೆ ಮನವಿ ಮಾಡಲಾಗಿತ್ತು. ಆದರೂ ಸಹ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಏ. 15ರಂದು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಸ್ವರೂಪ್ ತಿಳಿಸಿದರು. ಈ ಸಂಬಂಧ ಜಿಲ್ಲಾಧಿಕಾರಿ ಅವರಿಗೆ ತಿಳಿಸಲು ಕರೆ ಮಾಡಿದರೂ ಸಹ ಜಿಲ್ಲಾಧಿಕಾರಿಗಳು ನಮ್ಮ ಕರೆಯನ್ನು ಸ್ವೀಕರಿಸುತ್ತಿಲ್ಲ. ನಂತರ ಉಪ ವಿಭಾಗಾಧಿಕಾರಿಗಳಿಗೆ ಕರೆ ಮಾಡಿ ಬಲರಾಮ್ ವಿರುದ್ಧ ದೂರು ನೀಡಿದ್ದೇನೆ ಎಂದು ಸ್ವರೂಪ್ ಹೇಳಿದರು.