ಹಾಸನ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ೨೦೧೮ರ ಫಲಿತಾಂಶಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಪಡೆಯಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭವಿಷ್ಯ ನುಡಿದರು.
ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಜಾವಗಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹಾಗೂ ಮಾರ್ಗದರ್ಶನದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದು ೨೦೧೮ಕ್ಕಿಂತ ಹೆಚ್ಚಿನ ಸ್ಥಾನವನ್ನು ಪಡೆದು ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ ಎಂದರು.
ಡಬಲ್ ಇಂಜಿನ್ ಸರ್ಕಾರದ ಪರಿಣಾಮ ದೇಶದಲ್ಲಿ ಬದಲಾವಣೆ ಕಂಡಿದೆ ಇದನ್ನು ಜನ ಅರ್ಥ ಮಾಡಿಕೊಂಡಿದ್ದಾರೆ. ಎಷ್ಟು ಪ್ರಮಾಣದಲ್ಲಿ ರೈಲ್ವೆ, ರಸ್ತೆ ಅಭಿವೃದ್ಧಿಯಾಗುತ್ತಿದೆ. ಎಲ್ಲಾ ಸಂಗತಿಗಳನ್ನು, ಮೂಲಭೂತ ಸೌಲಭ್ಯ ಸ್ಕೀಮ್ ಗಳನ್ನು ಜನ ನೋಡಿದ್ದಾರೆ. ಇದೇ ಡಬಲ್ ಇಂಜಿನ್ ಸರ್ಕಾರ ಮುಂದೆಯು ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಯಾತ್ರೆಯನ್ನು ನಾವು ಮಾಡುತ್ತಿದ್ದೇವೆ ಈ ಬಾರಿ ಜನರು ಪರಿವಾರದ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ಇರುವ ಬಿಜೆಪಿ ಪಾರ್ಟಿಗೆ ಮತವನ್ನು ಕೊಡಲಿದ್ದಾರೆ ಎಂದರು. ಬೇಲೂರು, ಸಕಲೇಶಪುರ, ಹಾಸನದಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ನಾನು ಮತ್ತು ಸಹೋದರಿ ಶೋಭಾ ಕರಂದ್ಲಾಜೆ ಬಂದಿದ್ದೇವೆ. ನಾನು ಉತ್ತರ ಕರ್ನಾಟಕ, ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕದಲ್ಲಿ ಭಾಗವಹಿಸಿ ಇದೀಗ ಹಾಸನಕ್ಕೆ ಬಂದಿದ್ದು ನಮ್ಮ ನಿರೀಕ್ಷೆಗೂ ಮೀರಿ ವಿಜಯ ಸಂಕಲ್ಪ ಯಾತ್ರೆ ಯಶಸ್ವಿಯಾಗಲಿದೆ ಎಂದು ಹೇಳಿದರು.
ಮಾಡಾಳು ವಿರೂಪಾಕ್ಷಪ್ಪ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಲೋಕಾಯುಕ್ತಕ್ಕೆ ಅಧಿಕಾರ ಕೊಟ್ಟು ಅದನ್ನು ಬಲಗೊಳಿಸಿದ್ದು ಬಿಜೆಪಿ ಬೊಮ್ಮಾಯಿ ನೇತೃತ್ವದ ಸರ್ಕಾರ, ಈ ಸರ್ಕಾರಕ್ಕೆ ಅವರು ತಾಂತ್ರಿಕವಾಗಿ ಸಲಹೆ ಕೊಟ್ಟಿದ್ದಾರ ಹೇಳಲಿ, ಎಸಿಬಿ ವಿರುದ್ಧವಾಗಿ ಲೋಕಾಯುಕ್ತ ಪರವಾಗಿ ಏನು ಆದೇಶ ಬಂದಿದೆ ಇದರ ವಿರುದ್ಧ ಸುಪ್ರೀಂ ಕೋರ್ಟ್ಗೆ ಅಪಿಲ್ ಹೋಗಬೇಕು ಅಂತ ಇದೇ ಕಾಂಗ್ರೆಸ್ ಪಾರ್ಟಿಯವರು ಹೇಳಿದರು. ನಾವು ಲೋಕಾಯುಕ್ತಕ್ಕೆ ಬಲವನ್ನು ತುಂಬಿದ್ದೇವೆ. ಯಾರು ಕೂಡ ಭ್ರಷ್ಟಾಚಾರ ಮಾಡಿದರೂ ಬಿಡುವುದಿಲ್ಲ ಎಂಬ ಸಂದೇಶವನ್ನು ರವಾನೆ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.
ದಶಪಥ ಯೋಜನೆ ಕ್ರೆಡಿಟ್ ವಾರ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದರಲ್ಲಿ ಕ್ರೆಡಿಟ್ ವಾರ್ ಪ್ರಶ್ನೆ ಇಲ್ಲ! ಇವರ ಕಾಲದಲ್ಲಿ ಆಗಿಲ್ಲ ಅನ್ನೋದು ಸತ್ಯ. ಅವರ ರೀತಿ ಹೇಗಿದೆ ಅಂದ್ರೆ ನಾವು ಮಾಡಿರಲಿಲ್ಲ ನಾವು ಮಾಡದಿರುವುದ್ದಕ್ಕೆ ನೀವು ಈಗ ಮಾಡಿದ್ದೀರಿ ಅದಕ್ಕೆ ನಮಗೆ ಕ್ರೆಡಿಟ್ ಸಲ್ಲಬೇಕು ಅಂದ್ರೆ ಒಪ್ಪಲು ಸಾಧ್ಯವೇ? ಅವರು ಮಾಡಿದ್ದರೆ ನಮಗೆ ಮಾಡಲು ಆಗುತ್ತಿರಲಿಲ್ಲವೇ ಎಂದು ಟೀಕಿಸಿದರು.
ನಾವು ಬಿಟ್ಟು ಹೋಗಿದ್ದಕ್ಕೆ ನೀವು ಮಾಡಿದ್ದೀರಿ ಅನ್ನುವ ರೀತಿಯಲ್ಲಿ ಅವರು ಕ್ರೆಡಿಟ್ ತಗೊಳ್ಳುವಂತಹದ್ದು ಕಾಣ್ತಾ ಇದೆ. ನೂರು ಪ್ರತಿಶತ ಭೂಸ್ವಾಧೀನ ಸಹಿತವಾಗಿ ೧೦ ಸಾವಿರ ಕೋಟಿ ನರೇಂದ್ರ ಮೋದಿಯವರ ಕಾಲದಲ್ಲಿ ಬಿಡುಗಡೆಯಾಗಿದೆ. ಅವರು ಯಾವುದು ಹೇಳಿದ್ರು ಸಹಿತ ನಮ್ಮದು ಎಂದು ಹೇಳುವುದು ಸಾಮಾನ್ಯವಾಗಿದೆ ಎಂದು ಲೇವಡಿ ಮಾಡಿದರು.ಸಿದ್ದರಾಮಯ್ಯ ಅವರಿಗೆ ಇತ್ತೀಚಿಗೆ ಒಂದು ಅಭ್ಯಾಸ ಆಗಿಬಿಟ್ಟಿದ್ದು, ಯಾರು ಏನು ಮಾಡಿದರೂ ಕೂಡ ಅದು ನಂದು ಅಂತ ಹೇಳುವ ಚಾಳಿ ಶುರುವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಡುತ್ತಿದೆ ಮುಖ್ಯಮಂತ್ರಿ ವಸೂಲಿಗೆ ಇಳಿದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಅವರ ಹೇಳಿಕೆಗೆ ಪ್ರತಿಕ್ರಿಸಿದ ಅವರು ಡಿ.ಕೆ ಶಿವಕುಮಾರ ಜೈಲಿಗೆ ಏಕೆ ಹೋಗಿದ್ದರು ಎಂಬುದನ್ನು ಮೊದಲು ಅವರನ್ನು ಕೇಳಲಿ. ಅವರ ಮನೆಯಲ್ಲಿ ಅಪಾರ ಪ್ರಮಾಣದ ಹಣ ಮತ್ತು ಇತರೆ ದಾಖಲೆಗಳು ಲಭ್ಯವಾಯಿತು. ಡಿ.ಕೆ ಶಿವಕುಮಾರ ಅವರು ರಾಜಕೀಯಕ್ಕೆ ಬರುವ ಮೊದಲು ಅವರ ಒಟ್ಟು ಆಸ್ತಿ ಎಷ್ಟು, ಇಂದು ಎಷ್ಟಿದೆ ಎಂಬುದನ್ನು ಲೆಕ್ಕ ತೆಗೆಯಲಿ ಎಂದು ಪ್ರಶ್ನಿಸಿದರು.
ಈ ದೇಶದೊಳಗೆ ಭ್ರಷ್ಟಾಚಾರದ ನಿರ್ಮಾಪಕರು, ಭ್ರಷ್ಟಾಚಾರದ ಜನಕರು, ಕಾಂಗ್ರೆಸ್ ಪಾರ್ಟಿಯವರು. ಬಿಜೆಪಿ ಅಥವಾ ಇನ್ನಿತರ ಯಾವುದೇ ಪಾರ್ಟಿ ಅಧಿಕಾರದ ಹತ್ತಿರಕ್ಕೆ ಬಂದಿರುವುದು ಇತ್ತೀಚೆಗೆ. ೭೫ ವರ್ಷಗಳ ಸತತವಾಗಿ ದೇಶವನ್ನು ಮತ್ತು ಜನರನ್ನು ಕತ್ತಲೆಯಲ್ಲಿಟ್ಟು ಭ್ರಷ್ಟಾಚಾರದ ಮೇಲೆ ಭ್ರಷ್ಟಾಚಾರ ಮಾಡಿದ ಕಾಂಗ್ರೆಸ್ ಪಕ್ಷ ಎಂಬುದನ್ನು ಮರೆಯಬಾರದು.
ಇತ್ತೀಚಿನ ೨೫ ವರ್ಷದಲ್ಲಿ ಭ್ರಷ್ಟಾಚಾರ ಅನ್ನುವ ಶಬ್ದ ಕಡಿಮೆ ಆಗಿದೆ. ಹಿಂದೆ ಹಗರಣಗಳು ಶುರು ಮಾಡಿದಂತಹ ಕಾಂಗ್ರೆಸ್ ಪಾರ್ಟಿ ಮತ್ತು ಡಿಕೆ ಶಿವಕುಮಾರ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ ಎಂದು ಜರಿದರು.