ಹಾಸನ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನನ್ನ ಹಿತೈಷಿ. ನನ್ನ ಬಗ್ಗೆ ಯಾವಾಗಲು ಒಳಿತನ್ನು ಬಯಸುವವರಾಗಿರುವುದರಿಂದ ಅವರು ಪ್ರೀತಿಯಿಂದ ಆ ರೀತಿ ಮಾತನಾಡಿದ್ದಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ಅವರು ಏಕವಚನದಲ್ಲಿ ಮಾಡಿದ ವಾಗ್ದಾಳಿ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಶಾಸಕ ಪ್ರೀತಂ ಗೌಡ ಸಾಫ್ಟ್ ಆಗಿ ಉತ್ತರಿಸಿದರು.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಹೆಚ್.ಡಿ. ಕುಮಾರಸ್ವಾಮಿ ಅವರು ನಮ್ಮ ಅಣ್ಣ ಅವರು ಏನೇ ಮಾತನಾಡಿದರೂ ಅವರ ಮತ್ತು ನನ್ನ ನಡುವೆ ಆತ್ಮೀಯ ಭಾವನೆ ಇದೆ. ಕುಮಾರಸ್ವಾಮಿ ಅವರು ನನ್ನ ಹಿತೈಷಿ ಅವರು ಯಾವಾಗಲೂ ನನ್ನ ಒಳಿತನ್ನು ಬಯಸುವವರು. ಸರ್ಕಾರದ ಬಗ್ಗೆ ಮಾತನಾಡಿದರೆ ಅದಕ್ಕೆ ಉತ್ತರ ಕೊಡಲು ಸರ್ಕಾರ ಇದೆ. ವೈಯಕ್ತಿಕವಾಗಿ ಮಾತನಾಡಿದರೆ ಅದು ಪ್ರೀತಿಯಿಂದ ಮಾತನಾಡಿದ್ದರೆ ಎಂದು ತಿಳಿದು ಅವರ ಪ್ರೀತಿಯನ್ನು ನನ್ನ ಆಶೀರ್ವಾದ ಎಂದು ಭಾವಿಸಿ, ಅವರ ಆಶೀರ್ವಾದ ಯಾವಾಗಲೂ ನನ್ನ ಮೇಲಿರಲಿ ಎಂದು ನಯವಾಗಿ ಮಾತನಾಡಿದರು. ಕುಮಾರಣ್ಣ ಅವರು ರೇವಣ್ಣ ಕುಟುಂಬವನ್ನು ಅಭ್ಯರ್ಥಿ ಮಾಡುವುದಿಲ್ಲ ಎಂದು ಹೇಳಿದ್ದಾರೆ ಹೊರತೂ ಅವರು ನನ್ನನ್ನು ಸೋಲಿಸುವುದಾಗಿ ಹೇಳಿಲ್ಲ ಎಂದು ಟಾಂಗ್ ನೀಡಿದರು.