ಬೇಲೂರು: ಮಾ. ೧೦ ಪಂಚರತ್ನ ರಥ ಯಾತ್ರೆ ಮೂಲಕ ಬೇಲೂರು ವಿಧಾನಸಭಾ ಕ್ಷೇತ್ರವನ್ನು ಪ್ರವೇಶಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಇಂದು ಪುಷ್ಪಗಿರಿ ಮಹಾಸಂಸ್ಥಾನದ ಮಠಕ್ಕೆ ಭೇಟಿ ನೀಡುವ ಮೂಲಕ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.
ಕಳೆದ ದಿನದಿಂದ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸುತ್ತಿರುವ ಪಂಚರತ್ನ ರಥ ಯಾತ್ರೆ ಹಳೇಬೀಡು ಹೋಬಳಿಯ ಸಾಣೇನಹಳ್ಳಿ ಗ್ರಾಮದಲ್ಲಿ ವ್ಯಾಸ್ತವ್ಯ ಮಾಡಿದ್ದು, ಇಂದು ನೇರ ಹಳೇಬೀಡು ಸಿದ್ದಾಪುರ ಗ್ರಾಮದಿಂದ ಪುಷ್ಪಗಿರಿ ಮಠಕ್ಕೆ ಭೇಟಿ ನೀಡಿದರು. ಪುಷ್ಪಗಿರಿ ಮಠದಲ್ಲಿ ಅತ್ಯಾಧುನಿಕವಾಗಿ ನಿರ್ಮಿಸಿದ ಕಲಾಭವನದಲ್ಲಿ ಸರಳ ಕಾರ್ಯಕ್ರಮದಲ್ಲಿ ಪೂಜ್ಯರು ಮಾಜಿ ಮುಖ್ಯಮಂತ್ರಿಗಳಿಗೆ, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಹಾಸನ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಮತ್ತು ಸ್ಥಳೀಯ ಶಾಸಕ ಕೆ.ಎಸ್. ಲಿಂಗೇಶ್ ಒಳಗೊಂಡ ಮುಖಂಡರಿಗೆ ಆಶೀರ್ವಾದವನ್ನು ಮಾಡಿದರು.
ಬಳಿಕ ಮಾತನಾಡಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಪುಷ್ಪಗಿರಿ ಮಠದ ಸರ್ವತೋಮುಖ ಅಭಿವೃದ್ದಿ ನಿಜಕ್ಕೂ ಸಂತೋಷ ತಂದಿದೆ. ಕಿರಿಯ ವಯಸ್ಸಿನಲ್ಲೇ ಇಲ್ಲಿನ ಜಗದ್ಗುರು ಕೈಗೊಂಡ ಕೆಲಸ ಮಾದರಿಯಾಗಿದ್ದು, ಸ್ವಾಮೀಜಿಗಳು ನಡೆಸಿದ ನೀರಾವರಿ ಹೋರಾಟ ಎಂದಿಗೂ ಮರೆಯುತ್ತಿಲ್ಲ, ಅವರ ದಿಟ್ಟತನ ಮತ್ತು ವ್ಯಕ್ತಿತ್ವ ಇಡೀ ಸಮಾಜ ಅನುಸರಿಸಬೇಕಿದೆ. ಇಲ್ಲಿನ ಅತ್ಯಾಧುನಿಕ ಕಲಾ ಭವನ ಇಡೀ ಜಿಲ್ಲೆಯಲ್ಲಿ ಮಾದರಿಯಾಗಿದೆ. ರಾಜ್ಯಾದ್ಯಂತ ನಡೆಯುತ್ತಿರುವ ಪಂಚರತ್ನ ರಥ ಯಾತ್ರೆಗೆ ಸ್ವಾಮೀಜಿಗಳಿಂದ ಪೂರ್ಣ ಆಶೀರ್ವಾದ ಪಡೆಯಲಾಗಿದೆ ಮುಂದಿನ ಬಾರಿ ಮತ್ತೊಮ್ಮೆ ಬರುವ ತಿಳಿಸಿ ಅಲ್ಲಿಂದ ಮಲ್ಲಾಪುರ ಮತ್ತು ಹಗರೆ ಕಡೆ ಪ್ರಯಾಣ ಬೆಳೆಸಿದರು.