ಹಾಸನ: ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಈ ಕುರಿತಂತೆ ಬೆದರಿಕೆ ಹಾಕುವವರಿಗೆ ತಲೆ ಬಾಗುವುದಿಲ್ಲ ಎಂದು ಪರೋಕ್ಷವಾಗಿ ತಮ್ಮ ಸಹೋದರ ಎಚ್.ಡಿ.ರೇವಣ್ಣ ಕುಟುಂಬಕ್ಕೆ ಟಾಂಗ್ ನೀಡಿದ್ದಾರೆ.
ಈಗಾಗಲೇ ಎರಡು ಮೂರು ಬಾರಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ನಮಗೆ ಪಕ್ಷದ ಬೆಳವಣಿಗೆ ಮುಖ್ಯ, ಕಾರ್ಯಕರ್ತರು ಮುಖ್ಯ, ಅನಿವಾರ್ಯ ಇರುವಂತಹ ಸಂದರ್ಭದಲ್ಲಿ ನಮ್ಮ ಕುಟುಂಬದ ಸದಸ್ಯರು ತಲೆಕೊಡಲು ಸಿದ್ದರಿದ್ದೇವೆ. ಅನಿವಾರ್ಯ ಇಲ್ಲದಿರುವ ಕ್ಷೇತ್ರಗಳಲ್ಲಿ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ..!! ಈ ರೀತಿ ಏನಾದರೂ ಮಾಡಿದರೆ ಟೀಕೆಗೆ ಗ್ರಾಸವಾಗುತ್ತವೆ ಹಾಗೂ ಕಾರ್ಯಕರ್ತರಲ್ಲಿ ಗೊಂದಲ ಮೂಡಲಿದೆ. ಆದ್ದರಿಂದ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿ ಈಗಾಗಲೇ ಇದ್ದು ಗೊಂದಲ ಮೂಡಿಸುವ ಮೂಲಕ ಟೀಕೆಗೆ ಗುರಿಯಾಗುವುದು ಬೇಡ ಎಂದು ನಿರ್ಧಾರ ಮಾಡಿದ್ದೇನೆ. ಆದ್ದರಿಂದ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.
೨-೩ ದಿನದಲ್ಲಿ ಎರಡನೇ ಪಟ್ಟಿ ಬಿಡುಗಡೆ:
ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಇನ್ನೆರಡು ಮೂರು ದಿನದಲ್ಲಿ ಬಿಡುಗಡೆ ಮಾಡುವುದಾಗಿ ಕುಮಾರಸ್ವಾಮಿ ಹೇಳಿದರು. ನಮ್ಮದು ಪ್ರಾದೇಶಿಕ ಪಕ್ಷ ಹಾಗಾಗಿ ದೆಹಲಿಯಲ್ಲಿ ಕೂತು ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.