ಹಾಸನ: ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಜಿಲ್ಲೆಯ ಬಗ್ಗೆ ಇಂಚಿಂಚು ಮಾಹಿತಿ ಇರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಚನ್ನರಾಯಪಟ್ಟಣದ ವಡ್ಡರ ಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಭ್ಯರ್ಥಿ ಆಯ್ಕೆ ವಿಚಾರವಾಗಿ ತೀರ್ಮಾನ ಮಾಡತಕ್ಕಂತ ಅನುಭವ ನಮಗಿಂತ ಹೆಚ್ಚಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರಿಗೆ ಇದೆ. ನನಗೆ ಹಾಸನ ಜಿಲ್ಲೆಯ ಸಂಪೂರ್ಣವಾದಂತಹ ನರನಾಡಿ ಗೊತ್ತಿಲ್ಲ. ನಾನು ಹಾಸನ ಜಿಲ್ಲೆಯ ರಾಜಕಾರಣದಲ್ಲಿ ಈ ಕ್ಷಣದವರೆಗೂ ಹೆಚ್ಚಿನ ಸಮಯ ಕೊಟ್ಟಿಲ್ಲ ಅಂತಿಮವಾದ ನಿರ್ಣಯ ದೇವೇಗೌಡರೇ ಮಾಡುತ್ತಾರೆ ಅಲ್ಲಿಯವರೆಗೂ ಕಾಯಬೇಕು ಎಂದರು.
ಹಾಸನದಿಂದ ಕೆ.ಎಂ ರಾಜೇಗೌಡರ ಹೆಸರು ಕೇಳಿ ಬರುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇನ್ನೊಂದು ಮೂರನೇ ಹೆಸರು ಬಂದಿದೆ. ನಾಳೆ ನಾಲ್ಕನೆಯ ಹೆಸರು ಬರಬಹುದು, ಅಭ್ಯರ್ಥಿಗಳು ಘೋಷಣೆ ಆಗುವವರೆಗೂ ಆಡಿಶನ್ ಆದರೂ ಆಗಬಹುದು ಎನ್ನುವ ಮೂಲಕ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು.
ರಾಮನಗರದಿಂದ ಸಂಸದ ಡಿ.ಕೆ ಸುರೇಶ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು ಯಾರು ಬೇಕಾದರೂ ಎಲ್ಲಿ ಬೇಕಾದರೂ ನಿಲ್ಲುವ ಹಕ್ಕು ಸಂವಿಧಾನದಲ್ಲಿದೆ. ರಾಜಕೀಯದ ಫಲಿತಾಂಶಗಳಲ್ಲಿ ಯಾರು ಎಲ್ಲಿ ಬೇಕಾದರೂ ನಿಲ್ಲಬಹುದು. ಅವರು ಇಲ್ಲಿ ಯಾಕೆ ಬರುತ್ತಾರೆ, ಅಲ್ಲಿ ಯಾಕೆ ನಿಲ್ಲುತ್ತಾರೆ ಇದೆಲ್ಲ ಬಾಲೀಷ ಹೇಳಿಕೆ ಆಗಲಿದೆ ಆದ್ದರಿಂದ ಅವರು ನಿಲ್ಲುವುದು ಅವರ ಪಕ್ಷಕ್ಕೆ ಸೇರಿದ್ದು ಎಂದರು.
ಮಾರ್ಚ್ ೧೮ರಂದು ಹಲವಾರು ಕಡೆ ಪಂಚರತ್ನ ಯಾತ್ರೆಗೆ ಒತ್ತಾಯ ಕೇಳಿ ಬಂದಿದ್ದು, ಕಡೂರು, ಕೆ. ಆರ್. ಪೇಟೆ, ಪಿರಿಯಾಪಟ್ಟಣ ಯಾತ್ರೆ ಮುಂದುವರೆಸಲು ಒತ್ತಾಯ ಕೇಳಿ ಬರುತ್ತಿದ್ದು, ಯಾವ ರೀತಿಯಲ್ಲಿ ಪ್ಲಾನಿಂಗ್ ಮಾಡಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಹಾಸನದಿಂದ ಇನ್ನೂ ಏನೋ ಡಿಮ್ಯಾಂಡ್ ಮಾಡಿಲ್ಲ ಎಂದರು.
ಮಂಡ್ಯ ಮತ್ತು ಹಾಸನ ಜೆಡಿಎಸ್ ಭದ್ರನೆಲೆಯಾಗಿದ್ದು ಎರಡು ರಾಷ್ಟ್ರೀಯ ಪಕ್ಷಗಳು ಇವನ್ನು ಟಾರ್ಗೆಟ್ ಮಾಡಿದೆ. ಈಗಾಗಲೇ ಭದ್ರಕೋಟೆ ಛಿದ್ರ ಮಾಡುತ್ತೇವೆ ಅಂತ ಹೇಳುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಯಾರಿಗೆ ಭದ್ರಕೋಟೆಯನ್ನು ಭದ್ರ ಮಾಡಬೇಕೆಂದು ಮತದಾರರು ತೀರ್ಮಾನ ಮಾಡಲಿದ್ದಾರೆ ಎಂದರು.
ಬೆಂಗಳೂರು ಮೈಸೂರು ಟೋಲ್ ಸಂಗ್ರಹ ಮಾಡುವ ಮುಂಚೆ ಸರ್ವಿಸ್ ರೋಡ್ ಸಂಪೂರ್ಣವಾಗಿ ಒದಗಿಸಬೇಕು. ಲೋಪ ದೋಷಗಳನ್ನು ಸರಿಪಡಿಸಿ ಟೋಲ್ ಸಂಗ್ರಹಕ್ಕೆ ಮುಂದಾಗುವುದು ಸರಿ ಎಂಬುದು ನಮ್ಮ ಅಭಿಪ್ರಾಯವಾಗಿದೆ ಎಂದರು.
ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ನಾಗರಾಜ್ ಎಂಬುವವರೇ ಜೆಡಿಎಸ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಸಿ.ಎಂ ಇಬ್ರಾಹಿಂ ಅವರು ಗುಬ್ಬಿ ಶ್ರೀನಿವಾಸರವರನ್ನು ಮತ್ತೆ ಕರೆ ತರುವ ಬಗ್ಗೆ ಮಾತನಾಡಿದ್ದಾರೆ ಅದು ಹುಡುಗಾಟದ ಹೇಳಿಕೆಯಾಗಿದ್ದು ಈ ವಿಚಾರದಲ್ಲಿ ನನ್ನ ತೀರ್ಮಾನವೇ ಅಂತಿಮ ಎಂದು ಸ್ಪಷ್ಟಪಡಿಸಿದರು. ಅರಸೀಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಬಾಣಾವರ ಅಶೋಕ್ ಅವರನ್ನು ಈಗಾಗಲೇ ಆಯ್ಕೆ ಮಾಡಿ ಘೋಷಣೆ ಮಾಡಲಾಗಿದ್ದು ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದರು.
ಸ್ವರೂಪ್ಗೆ ಟಿಕೆಟ್ ನೀಡಲು ಒತ್ತಾಯ
ಚನ್ನರಾಯಪಟ್ಟಣ ರ್ಯಾಲಿ ವೇಳೆ ಸ್ವರೂಪ್ ಅಭಿಮಾನಿಗಳು ಸ್ವರೂಪ್ಗೆ ಜೆಡಿಎಸ್ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. ಅದನ್ನು ತಪ್ಪು ಅಂತ ನಾನೇನು ಹೇಳಲ್ಲ. ಶ್ರವಣ ಬೆಳಗೊಳದಲ್ಲಿ ಓದಿದವರು ಅವರ ಸ್ನೇಹಿತರು, ಹಿತೈಷಿಗಳು ಬಹಳ ಜನ ಇದ್ದಾರೆ. ರಾತ್ರಿ ೧೦:೦೦ ಗಂಟೆಯಲ್ಲಿ ಸಹ ಸ್ವರೂಪ್ ಅವರಿಗೆ ಟಿಕೆಟ್ ಕೊಡಿ ಎಂದು ಮನವಿ ಮಾಡಿದ್ದಾರೆ. ಇದರಲ್ಲಿ ತಪ್ಪೇನು ಇಲ್ಲ ನಾನು ನೆನ್ನೆ ಸಹ ಹೇಳಿದ್ದು ಪಕ್ಷದ ನಿಷ್ಠಾವಂತ ಕಾರ್ಯಕರ್ತನಿಗೆ ಟಿಕೆಟ್ ಕೊಡುತ್ತೇನೆ ಅದರಿಂದ ನಾನು ಹಿಂದೆ ಸರಿಯುವುದಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ರು. ಅಂತಿಮವಾಗಿ ಯಾರಿಗೆ ಟಿಕೆಟ್ ಕೊಡಬೇಕು ಎಂದು ದೇವೇಗೌಡರೇ ಪ್ರಕಟಿಸಲಿದ್ದಾರೆ ಎಂದರು.