ಬೇಲೂರು: ಹಾಸನ ವಿಧಾನ ಸಭೆ ಕ್ಷೇತ್ರದ ಜೆಡಿಎಸ್ ಟಿಕೇಟ್ ವಿಚಾರದಲ್ಲಿ ಕೆಲವರು ಗೊಂದಲ ಉಂಟು ಮಾಡುತ್ತಿದ್ದು ಪ್ರತಿಯೊಬ್ಬ ನಿಷ್ಟಾವಂತ ಕಾರ್ಯಕರ್ತರಿಗೆ ಟಿಕೆಟ್ ಕೇಳುವ ಹಕ್ಕಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದರು.
ಚಿಕ್ಕಮಂಗಳೂರು ಪಂಚರಥ ಯಾತ್ರೆಗೆ ತೆರಳುವ ಸಂದರ್ಭದಲ್ಲಿ ನೆಹರೂ ವೃತ್ತದ ಬಳಿ ಶಾಸಕ ಕೆ.ಎಸ್. ಲಿಂಗೇಶ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಅವರನ್ನು ಸ್ವಾಗತಿಸಿದರು. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಲವರು ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಬಗ್ಗೆ ಗೊಂದಲ ಉಂಟು ಮಾಡುತ್ತಿದ್ದಾರೆ. ಟಿಕೆಟ್ ಕೇಳುವ ಹಕ್ಕು ಸ್ವರೂಪ್ ಹಾಗೂ ಭವಾನಿ ರೇವಣ್ಣರವರಿಗೆ ಇದ್ದು, ಕೇವಲ ಅವರಿಗೆ ಮಾತ್ರವಲ್ಲದೆ ಪ್ರತಿಯೊಬ್ಬ ಜನತಾ ದಳದ ಕಾರ್ಯಕರ್ತರಿಗೆ ಟಿಕೆಟ್ ಕೇಳುವ ಹಕ್ಕಿದೆ. ಯಾರಿಗೆ ಕೊಡಬೇಕೆನ್ನುವುದು ಪಕ್ಷ ತೀರ್ಮಾನ ಮಾಡುತ್ತದೆ. ಅಲ್ಲದೆ ಇತ್ತೀಚಿಗೆ ಬೆಂಗಳೂರಿನ ಜೆಪಿ ಭವನದಲ್ಲಿ ಸಭೆ ಕರೆದಿದ್ದರು ಎನ್ನುವುದು ಶುದ್ದ ಸುಳ್ಳು, ಒಬ್ಬ ರಾಜ್ಯಾಧ್ಯಕ್ಷನಾಗಿ ನಾನು ಸಭೆ ಕರೆಯಬೇಕು, ಯಾವ ಸಭೆಯೂ ಇರಲಿಲ್ಲ. ಇದು ಕೆಲವರ ಸೃಷ್ಟಿಯಾಗಿದೆ.
ರೇವಣ್ಣ ಹಾಗೂ ಕುಮಾರಸ್ವಾಮಿಯವರ ನಡುವೆ ಭಿನ್ನಾಭಿಪ್ರಾಯ ಇದೆ ಎನ್ನುವುದು ಕೆಲವರ ತಪ್ಪು ಕಲ್ಪನೆ. ನಾನು 50 ವರ್ಷದಿಂದ ನೋಡುತ್ತಿದ್ದೇನೆ. ರೇವಣ್ಣ, ಕುಮಾರಸ್ವಾಮಿ, ಬಾಲಕೃಷ್ಣ, ರಮೇಶ್ ಈ ನಾಲ್ವರು ಸಹೋದರರ ನಡುವೆ ಭಿನ್ನಾಭಿಪ್ರಾಯ ಬರುತ್ತದೆ ಅದು ದೇವರೆ ಬಂದು ದೂರ ಮಾಡಬೇಕಷ್ಟೇ ಇದು ತಪ್ಪು ಕಲ್ಪನೆ ಎಂದ ಅವರು ಕಾಂಗ್ರೆಸ್ ಪಕ್ಷದ ಮನೆಗೆ ಬಾಗಿಲೇ ಇಲ್ಲಾ, ನಾವಾದರೂ ಮೊದಲಿಗೆ 93 ಜನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದೇವೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಕ್ಕೆ ನಿಜವಾಗಿ ಗಂಡಸ್ತನ, ಶಕ್ತಿ ಇದ್ದರೆ ಅವರು ಮೊದಲು ಅಭ್ಯರ್ಥಿಗಳನ್ನು ಘೋಷಣೆ ಮಾಡಲಿ ಅವರ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುವುದನ್ನು ಘೋಷಿಸಲಿ. ನಾವು ರೈತರ ಮಕ್ಕಳು ಅದಕ್ಕಾಗಿ ನಾವು ಹೆಚ್.ಡಿ.ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿ ಎಂದು ಹೇಳಿದ್ದೇವೆ. ನಾಳೆ ನಡೆಯುವ ಸಭೆಯಲ್ಲಿ ಮುಖ್ಯಮಂತ್ರಿ ಯಾರು ಎಂದು ಘೋಷಣೆ ಮಾಡಲಿ, ಯಾರಾದೋ ಹೆಸರು ಹೇಳಿಕೊಂಡು ಉದೋ ಎನ್ನುವುದಲ್ಲ, ಸೋನಿಯಮ್ಮನ ಉದೋ ಎನ್ನುವ ಬದಲು ಕನ್ನಡಮ್ಮನ ಪರವಾಗಿ ಕೈ ಎತ್ತಿ. ಎರಡು ರಾಷ್ಟ್ರೀಯ ಪಕ್ಷಗಳಿಂದ ರೈತರ ಹಾಗೂ ಜನಸಾಮಾನ್ಯರ ಮೇಲೆ ಮಾಡುತ್ತಿರುವ ದೌರ್ಜನ್ಯ ತೊಳೆಯಲು ಹೆಚ್.ಡಿ ದೇವೇಗೌಡ, ನಿಜಲಿಂಗಪ್ಪ ಹಾಗೂ ವಿರೇಂದ್ರ ಪಾಟೀಲ ಕಟ್ಟಿದಂತಹ ಜೆಡಿಎಸ್ ಪಕ್ಷ ಈ ಬಾರಿ ಅಧಿಕಾರ ಹಿಡಿಯುವುದಕ್ಕೆ ಪ್ರತೀ ತಾಲೂಕಿನಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆಯೇ ಸಾಕ್ಷಿ. ಅತೀ ಶೀಘ್ರದಲ್ಲೇ ಬೇಲೂರಿನಲ್ಲಿ ಪಂಚರತ್ನ ರಥಯಾತ್ರೆ ಆಗಮಿಸಲಿದ್ದು, ನಮ್ಮ ಶಕ್ತಿ ಏನು ಎಂಬುವುದನ್ನು ಮತ್ತೊಮ್ಮೆ ಪ್ರದರ್ಶನ ಮಾಡುತ್ತೇವೆ. ಶ್ರೀ ಚನ್ನಕೇಶವ ಆರ್ಶಿರ್ವಾದದಿಂದ ಲಿಂಗೇಶ ಗೆದ್ದು ಬರುತ್ತಾರೆ ನಾವೇ ಅಧಿಕಾರ ಹಿಡಿಯುವುದು ಶತಸಿದ್ಧ ಎಂದರು.
ಪ್ರಧಾನ ಕಾರ್ಯದರ್ಶಿ ಸಿ.ಹೆಚ್. ಮಹೇಶ, ಮುಖಂಡರಾದ ಬಿ. ಡಿ. ಚಂದ್ರೇಗೌಡ, ಚೇತನ, ಖಾದರ್, ಸೋಮಯ್ಯ, ದಿಲೀಪ, ಭಾರತಿ, ಸೌಮ್ಯ ಆನಂದ, ಕಮಲಾ ಚನ್ನಪ್ಪ, ಸುಭಾನ್, ಜಯರಾಂ, ಸತೀಶ ಸೇರಿದಂತೆ ಇತರರು ಹಾಜರಿದ್ದರು.