ಹಾಸನ: ನನಗೆ ಕುಟುಂಬದ ವ್ಯಾಮೋಹವಿಲ್ಲ. ನನ್ನ ಕುಟುಂಬ ಎಂದರೆ ರಾಜ್ಯದ ಆರೂವರೆ ಕೋಟಿ ಜನತೆ. ಇನ್ನು ಮೂರು ನಾಲ್ಕು ದಿನಗಳಲ್ಲಿ ಹಾಸನ ಕ್ಷೇತ್ರದ ಅಭ್ಯರ್ಥಿ ಪಟ್ಟಿ ಬಿಡುಗಡೆ ಆಗಲಿದ್ದು, ಅಲ್ಲಿವರೆಗೂ ಸಮಾಧಾನದಿಂದ ಇದ್ದು, ನಿಮ್ಮ ಪಕ್ಷದ ಸಂಘಟನೆ ಮುಂದುವರೆಯಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.
ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುವಾಗ ನಗರದ ಹಾಸನ ರಿಂಗ್ ರಸ್ತೆಯ ಸುಬೇದಾರ್ ವೃತ್ತದಲ್ಲಿ ಕಾರ್ಯಕರ್ತರು ಹೆಚ್.ಡಿ. ಕುಮಾರಸ್ವಾಮಿ ವಾಹನಕ್ಕೆ ಮುತ್ತಿಗೆ ಹಾಕಿದರು. ಈ ವೇಳೆ ಜೆಡಿಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ತೆರೆದ ತಮ್ಮ ವಾಹನದಲ್ಲೆ ನಿಂತು ಕೆಲ ಸಮಯ ಮಾತನಾಡಿದರು. ಅಧಿಕೃತವಾಗಿ ಹೆಚ್.ಪಿ. ಸ್ವರೂಪ್ ಎಂದು ಹೆಸರು ಪ್ರಸ್ತಾಪ ಮಾಡದಿದ್ದರೂ ಕಾರ್ಯಕರ್ತರಿಗೆ ನೋವಾಗದಂತೆ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡರು.
ಕೆಲ ಜೆಡಿಎಸ್ ಕಾರ್ಯಕರ್ತರು ನಿರಾಸೆಯಲ್ಲಿ ತಮ್ಮ ಆಕ್ರೋಶವ್ಯಕ್ತಪಡಿಸಿದಲ್ಲದೇ ಈಗಲೆ ಸ್ವರೂಪ್ ಹೆಸರು ಘೋಷಣೆ ಮಾಡಲು ಹಠ ಹಿಡಿದ ಪ್ರಸಂಗ ನಡೆಯಿತು. ಸಿಟ್ಟಿಗೆದ್ದ ಕುಮಾರಸ್ವಾಮಿ ಅವರು ಆಕ್ರೋಶಭರಿತವಾಗಿಯೇ ಮಾತನಾಡಿ ಕಾರ್ಯಕರ್ತರನ್ನು ಸುಮ್ಮನಿರಿಸಿದರು. ನಂತರ ಬಹಿರಂಗ ಭಾಷಣ ಮಾಡುತ್ತಾ, ನನ್ನ ಆರೋಗ್ಯ ಸರಿಯಾಗಿಲ್ಲ. ಶೃಂಗೇರಿ ಮೂಲಕ ಬರುವಾಗ ಹಾಸನದ ಮತ್ತೊಂದು ಜಾಗದಿಂದ ಹೋಗಬಹುದಿತ್ತು. ಆದರೇ ಕಾರ್ಯಕರ್ತರಿಗೆ ನಿರಾಸೆ ಮಾಡುವುದು ಬೇಡ ಎಂದು ನಿಮ್ಮೆಲ್ಲರ ಮಾತಿಗೆ ಬೆಲೆ ಕೊಟ್ಟು ಇಲ್ಲಿಗೆ ಬಂದಿದ್ದೇನೆ. ಈ ರೀತಿ ಕಿರುಚಾಡಿದರೇ ಯಾವ ಪ್ರಯೋಜನವಿಲ್ಲ. ಸಮಧಾನದಿಂದ ಇರಬೇಕೆಂದು ಮನವಿ ಮಾಡಿದಲ್ಲದೇ ಕೆಲ ಸಮಯ ಕುಮಾರಸ್ವಾಮಿ ಸಿಡಿಮಿಡಿಗೊಂಡರು. ಹಾಸನದ ರಾಜಕಾರಣದ ನಮಗೆ ಶಕ್ತಿ ಕೊಟ್ಟಿದೆ. ರಾಜ್ಯದಲ್ಲಿ ನಾವು 40-50 ಸೀಟು ಗೆಲ್ಲುವುದು ಕಷ್ಟವಿಲ್ಲ. ಪೂರ್ಣ ಬಹುಮತದ ಸೀಟು ಕೊಡುವ ಮೂಲಕ ನಮಗೆ ಶಕ್ತಿ ತುಂಬಬೇಕಾಗಿದೆ.
ನಾನು ಎರಡು ಬಾರಿ ಮುಖ್ಯಮಂತ್ರಿ ಆದಾಗ ಹಾಸನ ಜಿಲ್ಲೆಗೆ ಕೊಡುಗೆ ನೀಡಿದ್ದೇನೆ. ಹಾಸನದ ಯಾವುದೇ ಅಭಿವೃದ್ಧಿ ಕೆಲಸವಿದ್ರು ಕಣ್ಣು ಮುಚ್ಚಿ ಸಹಿ ಹಾಕಿದ್ದೇನೆ. ಹಾಸನವನ್ನು ಅಷ್ಟು ಸುಲಭವಾಗಿ ಹಾಳಾಗಕ್ಕೆ ಬಿಡಲು ಸಾಧ್ಯವಿಲ್ಲ. ಯೋಚನೆ ಮಾಡುತ್ತೇನೆ. ನನ್ನ ಪರಿಸ್ಥಿತಿ ನಿವೆಲ್ಲಾ ಅರ್ಥ ಮಾಡಿಕೊಳ್ಳಬೇಕು. ನಾನು ಏಕಾಂಗಿಯಾಗಿ ಇಡೀ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಈ ಚುನಾವಣೆಯಲ್ಲಿ ನನ್ನ ಶ್ರಮ ವ್ಯರ್ಥವಾಗಬಾರದು.
ನನಗೆ ಯಾವುದೇ ರೀತಿಯ ಕುಟುಂಬದ ವ್ಯಾಮೋಹವಾಗಲಿ ಇಲ್ಲ. ನನ್ನ ಹೋರಾಟ ಕುಟುಂಬಕ್ಕಲ್ಲ. ನನ್ನ ಕುಟುಂಬ ಎಂದ್ರೆ ಆರೂವರೆ ಕೋಟಿ ಜನತೆ ಎಂದು ತಿಳಿದುಕೊಂಡಿದ್ದೇನೆ ಎಂದರು. ಅವನ್ಯಾವನೋ ಸವಾಲು ಹಾಕಿದ್ದಾನ? ಈ ಕ್ಷೇತ್ರದ ಶಾಸಕ ಒಬ್ಬ ಕಾರ್ಯಕರ್ತನ ನಿಲ್ಲಿಸಿ ಗೆಲ್ಲಿಸೋ ಶಕ್ತಿ ನಮ್ಮಲ್ಲಿದೆ. ಆ ಮಾತಿಗೆ ಬದ್ಧನಾಗಿದ್ದೇನೆ ಎಂದು ಟಾಂಗ್ ನೀಡಿದರು.
ಹಾಸನ ಜಿಲ್ಲೆಯ ರಾಜಕಾರಣದ ಬಗ್ಗೆ ನಾನು ಎಂದೂ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಇನ್ನು ಮುಂದೆ ಹಾಸನ ಜಿಲ್ಲೆಯ ರಾಜಕಾರಣಕ್ಕೂ ನಾನು ಎಂಟ್ರಿ ಕೊಡುತ್ತೇನೆ. ನನ್ನ ಕುಟುಂಬವೆಂದರೆ ಜೆಡಿಎಸ್ ಎಲ್ಲಾ ಕಾರ್ಯಕರ್ತರೇ ಹೊರತು ವೈಯಕ್ತಿಕ ಸಂಬಂಧ ಮಾತ್ರವಲ್ಲ.
ನಿಮ್ಮ ಛಲಕ್ಕೆ ಲೋಪ ಆಗಲು ನಾನು ಬಿಡುವುದಿಲ್ಲ. ನನ್ನ ಕಾರ್ಯಕರ್ತರನ್ನು ನಾನು ಬಿಟ್ಟು ಕೊಡೋದಿಲ್ಲ ಎಂದು ಖಡಕ್ ಹೇಳಿಕೆ ನೀಡಿದರು.
ಕೆಲವು ಕಠಿಣ ತೀರ್ಮಾನ ಮಾಡುವಾಗ ನನಗೂ ಕಷ್ಟವಿದೆ. ಹಾಸನದ ಏಳೂ ಸ್ಥಾನ ಸೇರಿ 123 ಸ್ಥಾನ ಗೆಲ್ಲವೇಕು. ಹಾಸನದಲ್ಲಿ ನಾನು ಹುಟ್ಟಿದ್ದರೂ ರಾಜಕಾರಣ ಮಾಡಿದ್ದು ರಾಮನಗರದಲ್ಲಿ, ಅಲ್ಲಿ ಮತ ಕೇಳಲು ನಾನು ಹೋಗದಿದ್ದರೂ ಜನ ಗೆಲ್ಲಿಸುತ್ತಾರೆ. ಈ ಜಿಲ್ಲೆಯ ಅಭಿವೃದ್ಧಿಗೆ ನನ್ನ ಕಾಣಿಕೆ ಕೂಡ ಇದೆ. ಈ ಮಣ್ಣಿನ ಋಣ ನಾನು ಮರೆಯೊದಿಲ್ಲ. ನಿಮ್ಮ ಅಭಿಲಾಷೆ, ಭಾವನೆಗೆ ನಾನು ಚ್ಯುತಿ ತರೊದಿಲ್ಲ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದೀರಿ ನಾನು ಅರ್ಥಮಾಡಿಕೊಳ್ಲುತ್ತೇನೆ ಎಂದರು.
ಇದುವರೆಗೆ ನಮ್ಮ ಮೇಲೆ ಯಾರೂ ಬೆಟ್ಟು ಮಾಡಲು ಆಗಿರುವುದಿಲ್ಲ. ಜೆಡಿಎಸ್ ಪಕ್ಷವನ್ನು ನೋಡಿ ಬೇರೆ ಪಕ್ಷದದವರಿಗೆ ನಡುಕ ಶುರುವಾಗಿದೆ. ನಮಗೆ ನಮ್ಮ ಪಂಚರತ್ನ ಯಾತ್ರೆ ಆರಂಭಿಸಿದಾಗ ಯಾರೂ ನಮಗೆ ಪ್ರಚಾರ ನೀಡಲಿಲ್ಲ. ಆದರೆ ಈಗ ದಿನ ಬೆಳಗಾದ್ರೆ ನಮ್ಮ ಕುಟುಂಬದ ಬಗ್ಗೆ ಸಾಕಷ್ಟು ಬರುತ್ತಿದೆ. ಈ ಬಗ್ಗೆ ಯಾರೂ ಗಂಭೀರವಾಗಿ ತೆಗೆದುಕೊಳ್ಳಬೇಡಿ. ನಾನು ಯಾವುದೆ ಕಾರಣದಿಂದ ತಪ್ಪು ನಿರ್ದಾರ ಮಾಡೋದಿಲ್ಲ. ನೀವು ಪಕ್ಷದ ಸಂಘಟನೆ ಮುಂದುವರೆಸಿ ನಿಲ್ಲಿಸಬೇಡಿ ಎಂದು ಕಾರ್ಯಕರ್ತರಲ್ಲಿ ಹುಮ್ಮಸ್ಸು ತಂಬಿದರು.
ನನಗೆ ಎರಡು ಮೂರು ದಿನ ಅವಕಾಶ ಕೊಟ್ಟರೆ ನಿಮಗೆ ಪೂರಕವಾದ ಸಕಾರಾತ್ಮಕವಾಗಿ ನಾವು ತೀರ್ಮಾನ ಮಾಡುತ್ತೇವೆ. ಕೆಲವೇ ದಿನದಲ್ಲಿ ಎರಡನೆ ಪಟ್ಟಿ ಪ್ರಕಟ ಆಗಲಿದ್ದು, ಅದರಲ್ಲಿ ಹಾಸನದ ಹೆಸರು ಕೂಡ ಇರುತ್ತದೆ ಎಂದ ಕುಮಾರಸ್ವಾಮಿ ವಿಶ್ವಾಸ ತುಂಬಿದರು. ಉತ್ತರ ಕರ್ನಾಟಕದಲ್ಲಿ ಒಕ್ಕಲಿಗರು ಇಲ್ಲ ಆದರೂ ಉತ್ತರ ಕರ್ನಾಟಕದ ಜನ ಜೆಡಿಎಸ್ ಗೆ ಮತ ನೀಡಲು ತಯಾರಿದ್ದಾರೆ. ನನಗೆ ರಾಜಕೀಯ ಜೀವನದಲ್ಲಿ ಸತ್ವ ಪರೀಕ್ಷೆ ಇದೆ. ನವೆಂಬರ್ 18ರಿಂದ ರಥಯಾತ್ರೆ ಪ್ರಾರಂಭವಾಗಿ ಸುಮಾರು 20 ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದೇನೆ ಎಂದು ಹೇಳಿದರು.
ಕಲ್ಬುರ್ಗಿ, ಬಿಜಾಪುರ, ಬೀದರ್ ಪ್ರವಾಸ ಮಾಡಿದ್ದೆನೆ. ಜೆಡಿಎಸ್ ಪಕ್ಷವು ಸ್ವತಂತ್ರ ಸರ್ಕಾರ ತರಲು ಕರ್ನಾಟಕದ ರಾಜ್ಯದ ಜನತೆ ನಿರ್ಧಾರ ಮಾಡಿದ್ದಾರೆ. ಕೇವಲ ಹಾಸನ ವಿಧಾನಸಭೆ ಕ್ಷೇತ್ರಗೊಸ್ಕರ ನನ್ನ ಪಕ್ಷ ಹಾಳು ಮಾಡಲು ನಾನು ತಯಾರಿಲ್ಲ. ನಾನು ರಿಂಗ್ ರೋಡ್ನಲ್ಲಿ ಬರದೆ ಬೇರೆ ರಸ್ತೆ ಮೂಲಕ ಹೊಗಬಹುದಿತ್ತು. ಆದರೆ ಕಾರ್ಯ ಕರ್ತರು ಇಟ್ಟಿರುವ ಅಭಿಮಾನಕ್ಕೆ ಬಂದಿದ್ದೇನೆ ಎಚ್ಚರಿಕೆಯಿಂದಿರಿ ಎಂದು ಹೆಚ್.ಪಿ. ಸ್ವರೂಪ್ಗೆ ಜೈಕಾರ ಘೋಷಣೆ ಸಮಯದಲ್ಲಿ ಕುಮಾರ ಸ್ವಾಮಿ ಸಿಡಿಮಿಡಿಗೊಂಡು ಕಾರ್ಯಕರ್ತರು ಶಾಂತ ರಿತಿಯಿಂದ ಇರುವಂತೆ ಎಚ್ಚರಿಕೆ ಕೂಡ ನೀಡಿದರು. ಮಾಜಿ ಸಿಎಂ ಬರುವಿಕೆಗಾಗಿ ನಗರದ ರಿಂಗ್ ರಸ್ತೆ ವೃತ್ತದಲ್ಲಿ ಹೆಚ್.ಪಿ. ಸ್ವರೂಪ್ ಬೆಂಬಲಿತ ಮೂರು ಸಾವಿರಕ್ಕೂ ಹೆಚ್ಚು ಜನ ಕಾರ್ಯಕರ್ತರು ಗಂಟೆಗಟ್ಟಲೆ ಕಾದು ರಸ್ತೆಯಲ್ಲೆ ನಿಂತರು.