ಬೇಲೂರು: ಕಾಂಗ್ರೆಸ್ ಪಕ್ಷದಲ್ಲಿ ಯಾರಿಗೆ ಟಿಕೆಟ್ ದೊರಕಿದರು ಅವರ ಗೆಲುವಿಗೆ ಶ್ರಮಿಸಬೇಕು. ಇಲ್ಲಿ ವ್ಯಕ್ತಿ ಮುಖ್ಯ ಅಲ್ಲ ಪಕ್ಷ ಮುಖ್ಯ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ ಹೇಳಿದರು.
ಸರ್ಕಾರಿ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ 2ನೇ ಸುತ್ತಿನ ಪ್ರಜಾಧ್ವನಿ ಯಾತ್ರೆಯ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಸಚಿವ ಬಿ.ಶಿವರಾಂ, ಮಾಜಿ ಜಿ.ಪಂ ಸದಸ್ಯ ವೈ.ಎನ್ ಕೃಷ್ಣೇಗೌಡ, ಗ್ರಾನೈಟ್ ರಾಜಶೇಖರ್, ಕೀರ್ತನಾ ರುದ್ರೇಶಗೌಡ ಎಲ್ಲರೂ ಒಗ್ಗೂಡಿ ಯಾರಿಗೆ ಟಿಕೆಟ್ ದೊರೆತರೂ ಗೆಲುವಿಗೆ ಶ್ರಮಿಸಬೇಕು ಎಂದರು.
ಡಾ. ಬಿ.ಆರ್ ಅಂಬೇಡ್ಕರ್ ಬರೆದಿರುವ ಸಂವಿಧಾನಕ್ಕೆ ಬದ್ಧವಾಗಿ ಜನಪರ ಕಾರ್ಯಕ್ರಮಗಳನ್ನು ರೂಪಿಸಿ ದೇಶದ ಎಲ್ಲಾ ಜಾತಿ ಧರ್ಮದ ಒಳಿತಿಗಾಗಿ ಶ್ರಮಿಸಿದ ಏಕೈಕ ಪಕ್ಷವೆಂದರೆ ಅದು ಕಾಂಗ್ರೆಸ್ ಪಕ್ಷ. ಸಂವಿಧಾನಕ್ಕೆ ವಿರುದ್ಧವಾಗಿ ರಾಜ್ಯ ಮತ್ತು ದೇಶದಲ್ಲಿ ಡಬಲ್ ಇಂಜಿನ್ ಸರ್ಕಾರ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವನ್ನು ಈ ಬಾರಿಯ ಚುನಾವಣೆಯಲ್ಲಿ ಕಿತ್ತೊಗೆಯಬೇಕು. ಚುನಾವಣೆ ಹತ್ತಿರ ಬಂದಾಗ ಈ ರಾಜ್ಯಕ್ಕೆ ಪದೇ ಪದೇ ಪ್ರಧಾನ ಮಂತ್ರಿ, ಗೃಹ ಸಚಿವರು ಬಂದು ಹೋಗುತ್ತಿದ್ದಾರೆ. ಆದರೆ ಕೋವಿಡ್ ಹಾಗೂ ಪ್ರವಾಹ ಬಂದಾಗ ರಾಜ್ಯದ ಕಡೆ ತಿರುಗಿ ನೋಡಲಿಲ್ಲ. ಉತ್ತರ ಕರ್ನಾಟಕ ಮತ್ತು ಕೊಡಗಿನಲ್ಲಿ ಪ್ರವಾಹಕ್ಕೆ ಸಾವಿರಾರು ಜನರ ಆಸ್ತಿ ಮನೆ ಕಳೆದುಕೊಂಡಿದ್ದರೂ ಸಮಸ್ಯೆಗೆ ಸ್ಪಂದಿಸಲಿಲ್ಲ. ಆದರೆ ಈಗ ತಿಂಗಳಿಗೆ ನಾಲ್ಕೈದು ಬಾರಿ ಬಂದು ಹೋಗುತ್ತಾರೆ ಎಂದು ವ್ಯಂಗ್ಯವಾಡಿದರು.
ಶಾಸಕ ದಿ. ವೈ.ಎನ್ ರುದ್ರೇಶಗೌಡ ಎರಡು ಬಾರಿ ಶಾಸಕರಾಗಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಬಿಜೆಪಿ ಆಪರೇಷನ್ ಕಮಲ ಮಾಡಿ ರುದ್ರೇಶಗೌಡರನ್ನು ಸೆಳೆಯಲು ಪ್ರಯತ್ನಿಸಿದಾಗ ಪಕ್ಷನಿಷ್ಠ ಮೆರೆದು ಕೊಡುಗೈ ದಾನಿಯಾಗಿ ಉಳಿದರು ಎಂದು ಶ್ಲಾಘಿಸಿದರು. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗಲೆಲ್ಲ ಜನಪರವಾದ ಯೋಜನೆಗಳನ್ನು ಜಾರಿಗೆ ತಂದು ಜನ ಮೆಚ್ಚುಗೆ ಪಡೆದಿದೆ. ಆದರೆ ಈಗಿನ ಬಿಜೆಪಿ ಸರ್ಕಾರಕ್ಕೆ ಭ್ರಷ್ಟಾಚಾರದಿಂದ ಹಣ ಮಾಡುವುದೇ ಏಕೈಕ ಗುರಿಯಾಗಿದೆ. ಪಿ.ಎಸ್.ಐ ನೇಮಕಾತಿಯಲ್ಲಿ ಕೋಟ್ಯಾಂತರ ಹಣ ಅವ್ಯವಹಾರ ನಡೆದಿದ್ದು 50 ಸಾವಿರ ಉದ್ಯೋಗ ಆಕಾಂಕ್ಷಿಗಳಿಗೆ ಅನ್ಯಾಯ ಮಾಡಿದ್ದಾರೆ. ನೂರಾರು ಯುವಕರಿಗೆ ಉದ್ಯೋಗ ನೀಡುವುದಾಗಿ ಬಿಜೆಪಿ ಸರ್ಕಾರ ಭರವಸೆ ನೀಡಿತ್ತು. ಯಾರಿಗಾದರೂ ಒಬ್ಬನಿಗೆ ಉದ್ಯೋಗ ಸಿಕ್ಕಿದೆಯಾ ತೋರಿಸಲಿ, ವಿದೇಶದಿಂದ ಕಪ್ಪು ಹಣ ತಂದು ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದಿದ್ದರು. ಯಾರಿಗಾದರೂ ಅಚ್ಚೆ ದಿನ ಬಂತಾ ಎಂದು ಪ್ರಶ್ನೆ ಮಾಡಿದರು? ಬಿಜೆಪಿ ಸರ್ಕಾರದಲ್ಲಿ ಇಲ್ಲಿನ ಜೆಡಿಎಸ್ ಶಾಸಕರ ಕೈಯಲ್ಲಿ ತಾಲೂಕನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಿದೆಯೇ ಇಲ್ಲ ಎಂದು ಪ್ರಶ್ನೆ ಮಾಡಿದ ಅವರು ಇಲ್ಲಿನ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವ ಮೂಲಕ ಇಲ್ಲಿನ ಅಭಿವೃದ್ಧಿಗೆ ಮುಂದಾಗಬೇಕು ಎಂದರು.
ಕಾಂಗ್ರೆಸ್ ಕಾರ್ಯ ಅಧ್ಯಕ್ಷ ಧ್ರುವ ನಾರಾಯಣ ಮಾತನಾಡಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಸಂವಿಧಾನದ ಆಶಯದಂತೆ ಈ ದೇಶದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ನಡೆಸಿದೆ. ಈ ಕ್ಷೇತ್ರದ ಅಭಿವೃದ್ಧಿಗಾಗಿ, ಶ್ರೀಸಾಮಾನ್ಯರು ನೆಮ್ಮದಿಯಿಂದ ಜೀವನ ನಡೆಸಲು ಈ ಬಾರಿ ಕಾಂಗ್ರೆಸ್ ಗೆ ಅವಕಾಶ ಮಾಡಿಕೊಡಬೇಕು. ಸಂವಿಧಾನ ವಿರೋಧಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಅಧಿಕಾರಕ್ಕೆ ತರಲು ಮತದಾರರು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸದ ಡಿಕೆ ಸುರೇಶ, ಚಂದ್ರಶೇಖರ್, ಮಾಜಿ ಸಚಿವರಾದ ಬಿ. ಶಿವರಾಂ, ಎಚ್. ಎಂ. ರೇವಣ್ಣ, ಕೆಪಿಸಿಸಿ ಸದಸ್ಯ ಮೋಹನ, ಜಿಲ್ಲಾಧ್ಯಕ್ಷ ಈ.ಎಚ್ ಲಕ್ಷ್ಮಣ, ಮಾಜಿ ಜಿ.ಪಂ ಸದಸ್ಯ ವೈ.ಎನ್ ಕೃಷ್ಣೇಗೌಡರು, ಗ್ರಾನೈಟ್ ರಾಜಶೇಖರ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ ನಿಶಾಂತ್, ಕೀರ್ತನಾ ರುದ್ರೇಶ್ ಗೌಡ, ಹೆಚ್.ಕೆ ಜವರೇಗೌಡ, ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್ ವೆಂಕಟೇಶ, ಪುರಸಭೆ ಅಧ್ಯಕ್ಷ ತೀರ್ಥ ಕುಮಾರಿ ವೆಂಕಟೇಶ, ಮಾಜಿ ಅಧ್ಯಕ್ಷ ಜಿ.ಶಾಂತಕುಮಾರ, ಉಪಾಧ್ಯಕ್ಷೆ ಉಷಾ ಸತೀಶ್, ಮಾಜಿ ಜಿ.ಪಂ ಸದಸ್ಯ ತೌಫಿಕ್, ಕೆಪಿಸಿಸಿ ಮಾಜಿ ಸದಸ್ಯ ಬಿಎಲ್ ಧರ್ಮೇಗೌಡ, ಯುವ ಘಟಕ ಅಧ್ಯಕ್ಷ ಅಶೋಕ, ಪುರಸಭೆ ಸದಸ್ಯರಾದ ಅಶೋಕ, ಭರತ, ಫಯಾಜ್, ತಾರಾ ಚಂದನ, ಅಬ್ದುಲ್ ಸಮದ್, ಲಿಂಗೇಶ್ ಸತ್ಯ ನಾರಾಯಣ, ಶಿವು ಚಂದ್ರಶೇಖರ, ರಂಗನಾಥ, ಗೋಪಿನಾಥ, ದೇವರಾಜ, ಸಲೀಂ, ಮಂಜುನಾಥ, ಜಾಕೀರ್ ಇತರರು ಹಾಜರಿದ್ದರು.