ಬೇಲೂರು: ಪಟ್ಟಣವನ್ನು ಸುಂದರ ನಗರವನ್ನಾಗಿಸುವ ಗುರಿಗೆ ಎಲ್ಲರೂ ಕೈ ಜೋಡಿಸಬೇಕೆಂದು ಶಾಸಕ ಹೆಚ್ ಕೆ ಸುರೇಶ್ ಕರೆ ನೀಡಿದರು. ಪಟ್ಟಣದ ಪುರಸಭೆ ಮುಂಭಾಗದಲ್ಲಿ ಆರ್ ಆರ್ ಆರ್ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಶಾಸಕರಾಗಿ ಆಯ್ಕೆಯಾದ ನಂತರ ಇದು ನನ್ನ ಮೊದಲ ಕಾರ್ಯಕ್ರಮ. ಸ್ವಚ್ಚ ಭಾರತದ ಅಭಿಯಾನದಡಿ ಈಗಾಗಲೇ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ನನ್ನ ಜೀವನ ನನ್ನ ಸ್ವಚ್ಚ ನಗರ ಅಭಿಯಾನಕ್ಕೆ ಎಲ್ಲರೂ ಸಹ ಕೈ ಜೋಡಿಸಬೇಕು. ಇದರ ಉದ್ದೇಶ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿದ್ದರೆ ನಮ್ಮ ಆರೋಗ್ಯ ಸಹ ಸದೃಡವಾಗಿರುತ್ತದೆ. ಅದಕ್ಕಾಗಿ ನೀವೆಲ್ಲರೂ ಸಹ ನಮ್ಮ ಜೊತೆ ಕೈ ಜೋಡಿಸಬೇಕು. ತಮ್ಮ ಮನೆಗಳಲ್ಲಿ ನವೀಕರಿಸಿ ಮರುಬಳಕೆ ಮಾಡಬಹುದಾದ ಸುಮಾರು ಹತ್ತು ಹಲವು ವಸ್ತುಗಳನ್ನು ಹೊರಗಡೆ ಬಿಸಾಡದೆ ಪುರಸಭೆಯವರು ಸ್ಥಾಪಿಸಿರುವ ಕೇಂದ್ರಗಳಲ್ಲಿ ಅವುಗಳನ್ನು ನೀಡುವಂತೆ ಮನವಿ ಮಾಡಿದ ಅವರು ಸಾರ್ವಜನಿಕರು ಪ್ಲಾಸ್ಟಿಕ್ ಉಪಯೋಗಿಸುವುದನ್ನು ಮೊದಲು ಕಡಿಮೆ ಮಾಡಿದಾಗ ಮಾತ್ರ ನಾವು ಪರಿಸರ ಸ್ವಚ್ಚ ಮಾಡಲು ಸಾಧ್ಯ ಎಂದರು.
ಈಗಾಗಲೇ ಪುರಸಭೆ ವ್ಯಾಪ್ತಿಯಲ್ಲಿ ಉತ್ತಮ ಕಾಮಾಗಾರಿಯಾಗುತ್ತಿದ್ದು ಅವುಗಳು ಗುಣಮಟ್ಟದಲ್ಲಿ ಇರಬೇಕು. ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಮದ್ಯವರ್ತಿಗಳನ್ನು ಸೇರಿಸದೆ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳ ಸಹಕಾರ ಪಡೆದು ನೊಂದಂತವರಿಗೆ ಸಹಾಯ ಮಾಡುವ ಮೂಲಕ ಉತ್ತಮ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದ ಅವರು ತಾಲೂಕಿನಲ್ಲಿ ಭ್ರಷ್ಟಾಚಾರ ಮುಕ್ತ ಮಾಡುವ ಉದ್ದೇಶದಿಂದ ಜನತೆ ನನಗೆ ಆರ್ಶಿರ್ವಾದ ಮಾಡಿದ್ದು ಅವರ ನಂಬಿಕೆ ಉಳಿಸಿಕೊಳ್ಳುವುದು ಸತ್ಯ. ಅಲ್ಲದೆ ಪ್ರತೀ 23 ವಾರ್ಡ್ ಗಳಿಗೂ ಖುದ್ದು ಭೇಟಿ ನೀಡಿ ಅಲ್ಲಿಯ ಸಮಸ್ಯೆಗಳನ್ನು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಹಾಗೂ ಚುನಾಯಿತ ಪ್ರತಿನಿಧಿಗಳೊಂದಿಗೆ ಸೇರಿ ಆಲಿಸಿ, ಪುರಸಭೆ ವ್ಯಾಪ್ತಿಯಲ್ಲಿ ಸಮಗ್ರ ಅಭಿವೃದ್ಧಿಗೆ ನಮ್ಮೊಂದಿಗೆ ನಿಯೋಗ ತೆರಳಿ ಹೆಚ್ಚಿನ ರೀತಿಯ ಅನುದಾನವನ್ನು ತಂದು ಅಭಿವೃದ್ಧಿ ಪಡಿಸಲಾಗುವುದು ಎಂದರು.
ನಂತರ ಮಾತನಾಡಿದ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಅವರು ವಿದ್ಯಾವಂತರಿಂದಲೇ ಇಂದು ಪಟ್ಟಣದಲ್ಲಿ ಅಸ್ವಚ್ಚತೆ ಕಾರಣವಾಗುತ್ತಿದೆ. ಇದು ವಿಶ್ವ ವಿಖ್ಯಾತ ಪ್ರವಾಸಿ ತಾಣ ಪ್ರತಿಯೊಬ್ಬರ ಸಹಕಾರ ಇದ್ದಾಗ ಮಾತ್ರ ಪುರಸಭೆಯು ಸ್ವಚ್ಚ ನಗರ ಮಾಡಲು ಸಾಧ್ಯ. ಆದರೆ ಇಂದು ನಮ್ಮ ಪೂರ್ವಿಕರು ಇತ್ತೀಚಿನ ದಿನಗಳಲ್ಲಿ ಮಡಿವಂತರೇ ಕೆರೆ ಕಟ್ಟೆಗಳಲ್ಲಿ ಮೌಡ್ಯಗಳಿಗೆ ಬಲಿಯಾಗಿ ಅಸ್ವಚ್ಚತೆಗೆ ಕಾರಣರಾಗುತ್ತಿದ್ದಾರೆ. ತಾವು ತಂದಂತ ಬಟ್ಟೆ ಇನ್ನಿತರ ವಸ್ತುಗಳನ್ನು ಕೆರೆಯಲ್ಲಿ ಹಾಕುವ ಮೂಲಕ ಮಲಿನ ಮಾಡುತ್ತಿದ್ದಾರೆ. ತಮ್ಮ ಮನೆಯಲ್ಲಿರುವ ಮಕ್ಕಳ ಹಳೆ ಬಟ್ಟೆ, ಆಟಿಕೆ ಸಾಮಾನು, ಪ್ಲಾಸ್ಟಿಕ್ ಇನ್ನಿತರ ನಿರುಪಯುಕ್ತ ವಸ್ತುಗಳನ್ನು ಪುರಸಭೆ ವತಿಯಿಂದ ಈಗಾಗಲೇ ಗುರುತು ಮಾಡಿರುವಂತಹ ಮಳಿಗೆಗಳಿಗೆ ತಂದು ನೀಡುವ ಮೂಲಕ ಸಾರ್ವಜನಿಕರು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದ ಅವರು ಪಟ್ಟಣದ ವಾಣಿಜ್ಯ ಸಂಕೀರ್ಣದಲ್ಲಿ ಸಂಜೆ ಸಮಯದಲ್ಲಿ ಕಸವನ್ನು ರಸ್ತೆ ಬದಿಯಲ್ಲಿ ಸುರಿಯುತ್ತಿರುವುದು ಕಂಡು ಬಂದಿದ್ದು, ಅದು ಮತ್ತೊಮ್ಮೆ ಪುನರಾವರ್ತನೆಗೊಂಡರೆ ಅಂತವರ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ನಂತರ ಸದಸ್ಯ ಶಾಂತಕುಮಾರ್ ಮಾತನಾಡಿ ಸ್ವಚ್ಚ ಭಾರತ ಅಭಿಯಾನದಡಿ ಈಗಾಗಲೇ ಸರ್ಕಾರದ ಯೋಜನೆಯ ಆರ್ ಆರ್ ಆರ್ ಅನ್ನು ಚಾಲನೆ ನೀಡಿದ್ದು, ಪುರಸಭೆ ವತಿಯಿಂದ ಹಸಿ ಕಸ, ಒಣಕಸವನ್ನು ಬೇರ್ಪಡಿಸುವ ಕೆಲಸ ಮಾಡಲಾಗುತ್ತಿದ್ದು ಪ್ರತಿನಿತ್ಯ ಟಿಪ್ಪರ್ ಮೂಲಕ ಕಸ ಪಡೆಯುತ್ತಿದ್ದರೂ ಸಹ ಕೆಲವರು ಬೀದಿ ಬದಿಯಲ್ಲಿ ಕಸ ಹಾಕುತ್ತಿದ್ದು ಕೇವಲ ಪುರಸಭೆ ಕೆಲಸ ಎಂಬುವುದನ್ನು ಮಾತ್ರ ಜನತೆಗೆ ತಿಳಿದಿದೆ ಆದರೆ ಎಲ್ಲಾರ ಸಹಕಾರ ಇದ್ದಾಗ ಮಾತ್ರ ಪಟ್ಟಣದ ಅಭಿವೃದ್ಧಿ ಮಾಡಲು ಸಾಧ್ಯ ಎಂದರು. ಇದೇ ವೇಳೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಜಮೀಲಾ ತೌಫಿಕ್, ಸದಸ್ಯರಾದ ಅಶೋಕ್, ಸೌಮ್ಯ, ಉಷಾ, ಬಿ ಗಿರೀಶ್, ಜಗದೀಶ, ಶೈಲೇಶ್, ಪ್ರಭಾಕರ, ಮೀನಾಕ್ಷಿ, ಅಕ್ರಮ್, ಪೈಂಟ್ ರವಿ, ಮುಖ್ಯಾಧಿಕಾರಿ ಮಂಜುನಾಥ, ವ್ಯವಸ್ಥಾಪಕ ಪ್ರಶಾಂತ, ಲೋಹಿತ್, ಪ್ರಸನ್ನ, ಪೃಥ್ವಿ ಇತರರು ಹಾಜರಿದ್ದರು.