ಬೇಲೂರು: ತಾಲೂಕಿನ ಹೆಬ್ಬಾಳು ಗ್ರಾಮದ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ಹೆಬ್ಬಾಳು ಉತ್ಸವ-೨೦೨೩, ಸಾಂಸ್ಕೃತಿಕ ಸಂಭ್ರಮ ಮತ್ತು ಅಭಿನಂದನಾ ಕಾರ್ಯಕ್ರಮ ಅತ್ಯಂತ ಸುಸಂಪನ್ನವಾಗಿ ನಡೆಯುವ ಮೂಲಕ ಜನ ಮೆಚ್ಚುಗೆ ಪಡೆಯಿತು.
ಇದೇ ಪ್ರಥಮ ಭಾರಿಗೆ ಹೆಬ್ಬಾಳು ಗ್ರಾಮದ ವತಿಯಿಂದ ಹಮ್ಮಿಕೊಂಡ ಹೆಬ್ಬಾಳು ಉತ್ಸವ, ಸಾಂಸ್ಕೃತಿಕ ಸಂಭ್ರಮ, ಅಭಿನಂದನಾ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಲಿಂಗೇಶ ಉದ್ಘಾಟನೆ ನಡೆಸಿ ಮಾತನಾಡಿದ ಅವರು ಹೆಬ್ಬಾಳು ಗ್ರಾಮಕ್ಕೆ ಐತಿಹಾಸಿಕ ಹಿನ್ನಲೆ ಹೊಂದಿದೆ. ಬೇಲೂರು ತಾಲೂಕಿನಲ್ಲಿ ಯಾವುದೇ ಗ್ರಾಮ ಇಂತಹ ಹೈಟಕ್ ಸ್ಪರ್ಶ ಹೊಂದಿಲ್ಲ, ಇದಕ್ಕೆ ಕಾರಣ ಸುಧಾಕರ್ ಮತ್ತು ಲೋಕೋಪಯೋಗಿ ಸಚಿವರ ಅಪ್ತ ಕಾರ್ಯದರ್ಶಿ ವಿರೂಪಾಕ್ಷರವರ ಅವಿರತ ಶ್ರಮ. ಇಂತಹವರು ಗ್ರಾಮಕ್ಕೆ ಒಬ್ಬರು ಇದ್ರೆ ಮಾದರಿ ಗ್ರಾಮ ಮಾಡಬಹುದು. ಮುಂದಿನ ದಿನದಲ್ಲಿ ಹೆಬ್ಬಾಳು ಏತ ನೀರಾವರಿ ಯೋಜನೆಯ ಮಹತ್ವಪೂರ್ಣತೆಯಿಂದ ಇಲ್ಲಿನ ೫ ಪಂಚಾಯಿತಿ ವ್ಯಾಪ್ತಿಗೆ ಬಹು ಉಪಯೋಗವಾಗುತ್ತದೆ. ಕೆಲವರು ಲಿಂಗೇಶಣ್ಣ ಏನು ಕೆಲಸ ಮಾಡಿದ್ದಾರೆ? ಎನ್ನುತ್ತಾರೆ. ಮೊದಲು ಕ್ಷೇತ್ರವನ್ನು ಒಮ್ಮೆ ಸಂಚರಿಸಲಿ ಎಂದು ತೀರುಗೇಟು ನೀಡಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಲೋಕೋಪಯೋಗಿ ಸಚಿವರ ಆಪ್ತ ಕಾರ್ಯದರ್ಶಿ ವಿರೂಪಾಕ್ಷ ಮಾತನಾಡಿ, ನಾವುಗಳು ಎಷ್ಟೇ ಬೆಳೆದರೂ ಜನಿಸಿದ ಗ್ರಾಮವನ್ನು ಮರೆಯಬಾರದು, ಕಾರಣ ಗ್ರಾಮಾಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾದ್ಯ. ಹೆಬ್ಬಾಳು ಸುಧಾಕರ ಹಾಗೂ ಗೆಳೆಯರು ಗ್ರಾಮ ನೀಲಿ ನಿಕಾಶೆಯನ್ನು ನಮ್ಮ ಬಳಿ ಚರ್ಚಿಸಿದ ಬಳಿಕ ನಾವು ಅಲ್ಪ ಮಟ್ಟಿದ ಸಹಾಯ ಮಾಡಿದ್ದೇವೆ. ಈಗಾಗಲೇ ರೂ. ೨ ಕೋಟಿಗೂ ಹೆಚ್ಚಿನ ಕೆಲಸವಾಗಿದೆ. ಶೀಘ್ರದಲ್ಲಿ ಹೆಬ್ಬಾಳು-ಮಲ್ಲಹಳ್ಳಿ ರಸ್ತೆಗೆ ರೂ ೧.೯೦ ಕೋಟಿ ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಗ್ರಾಮಸ್ಥರು ಇಂತಹ ರಸ್ತೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಪುಷ್ಪಗಿರಿ ಜಗದ್ಗುರು ಪೂಜ್ಯ ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿಗಳು ಮಾತನಾಡಿ, ಇತ್ತೀಚಿನ ಯುವಕರು ದುಶ್ಚಟಕ್ಕೆ ದಾಸರಾಗಿ ತಮ್ಮ ಅಮೂಲ್ಯವಾದ ಬದುಕನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ. ಗುರು-ಹಿರಿಯರ ಬಗ್ಗೆ ಗೌರವಾಭಿಮಾನವಿಲ್ಲದೆ ನಡೆಸುಕೊಳ್ಳುತ್ತಿರುವುದು ತೀರ ಶೋಚನೀಯವಾಗಿದೆ. ಯುವಕರು ದೇಶದ ಆಸ್ತಿ, ಅವರಿಗೆ ಮೌಲ್ಯಯುತ ತಿಳುವಳಿಕೆ ನೀಡಬೇಕಿದೆ ಎಂದರು.
ಗ್ರಾಮ ಪಂಚಾಯಿತಿ ಪ್ರಬಾರಿ ಅಧ್ಯಕ್ಷೆ ಗೀತಾ ಚಂದ್ರಶೇಖರ, ಲೋಕೋಪಯೋಗಿ ಇಲಾಖೆಯ ಮಂಜುನಾಥ, ಪುಟ್ಟಸ್ವಾಮಿ, ಸೋಮಶೇಖರ, ಗುತ್ತಿಗೆದಾರ ರಘುಪತಿ, ಇಂಜಿನಿಯರ್ ಮಹದೇವ, ಹೆಬ್ಬಾಳು ಸುಧಾಕರ, ಭುವನೇಶ, ಮಠದ ಆಡಳಿತಾಧಿಕಾರಿ ಕಿಟ್ಟಪ್ಪ, ಪತ್ರಕರ್ತ ಹೆಬ್ಬಾಳು ಹಾಲಪ್ಪ, ರತಿದೇವಿ, ಗಿರೀಶ, ಅಭಿಲಾಷ, ಜಗದೀಶ, ಶಶಿ, ರೇಣುಕಯ್ಯ ಕಾರ್ಯಕ್ರಮದ ಬಳಿಕ ಬೆಂಗಳೂರಿನ ಖ್ಯಾತ ಗಾಯಕ ಶಂಕರ ಶ್ಯಾನುಭೋಗ ಅವರಿಂದ ಅಮೋಘ ರಸಮಂಜರಿ ಮತ್ತು ಲಾಲಿತ್ಯಕುಮಾರ ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು.