ಬೇಲೂರು: ಕಿಡಿಗೇಡಿಗಳು ಹಚ್ಚಿದ ಬೆಂಕಿ ತೋಟದಲ್ಲಿದ್ದ ಕೃಷಿ ಪರಿಕರಗಳು ಸೇರಿದಂತೆ ಸುಮಾರು ಅಡಿಕೆ ಗಿಡ, ಹೆಬ್ಬೇವಿನ ಗಿಡಗಳು ಬೆಂಕಿಗೆ ಆಹುತಿಯಾಗಿವೆ.
ತಾಲೂಕಿನ ಚಿಕ್ಕಬೇಡಿಗೆರೆ ಗ್ರಾಮದ ರಂಗಯ್ಯ ಹಾಗೂ ಅವರ ಮಗ ಚಂದ್ರು ಅವರಿಗೆ ಸೇರಿದ ಸರ್ವೆ ನಂಬರ್ ೪೬ರ ೨ ಎಕರೆ ೩೦ ಕುಂಟೆ ಜಮೀನಿನಲ್ಲಿ ಅಡಿಕೆ, ಹೆಬ್ಬೇವು ಹಾಗೂ ಕೃಷಿಗೆ ಸಂಬಂಧಪಟ್ಟ ಪೈಪ್ ಗಳು, ಡ್ರಿಪ್ ಲೈನ್ ಸೇರಿದಂತೆ ಹಲವಾರು ಕೃಷಿಪರಿಕರಗಳು ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಸುಟ್ಟು ನಾಶವಾಗಿದೆ.
ಇದೇ ವೇಳೆ ತನ್ನ ನೋವು ತೋಡಿಕೊಂಡ ಚಂದ್ರು ನಾನು ಅಂಬುಲೆನ್ಸ್ ಚಾಲಕನಾಗಿದ್ದು, ಬಿಡುವಿನ ವೇಳೆಯಲ್ಲಿ ನಮಗಿರುವ ಅಲ್ಪ ಜಮೀನಿನಲ್ಲಿ ಸಾಲ ಮಾಡಿಕೊಂಡು ಅಡಿಕೆ, ತರಕಾರಿ, ತೆಂಗು, ಹೆಬ್ಬೇವು ಬೆಳೆದಿದ್ದೆವು. ಆದರೆ ಯಾರೋ ಕಿಡಿಗೇಡಿಗಳು ಬೇಲಿಗೆ ಬೆಂಕಿ ಹಾಕಿದ ಸಂದರ್ಭದಲ್ಲಿ ಆ ಬೆಂಕಿಯು ನಮ್ಮ ತೋಟಕ್ಕೆ ವ್ಯಾಪಿಸಿದ್ದರಿಂದ ಸುಮಾರು ೧೦೦ಕ್ಕೂ ಹೆಚ್ಚು ಅಡಿಕೆ, ತೆಂಗು ಸುಮಾರು ೭೫ ಸಾವಿರಕ್ಕೂ ಹೆಚ್ಚು ಕೃಷಿ ಪರಿಕರಗಳು ಬೆಂಕಿಗೆ ಆಹುತಿಯಾಗಿದೆ ಎಂದು ಕಣ್ಣೀರು ಹಾಕಿದರು.
ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳಾದ ಪ್ರಕಾಶ್, ಹನು ಮಂತು ಭೇಟಿ ನೀಡಿ ಪರಿಶೀಲಿಸಿದ್ದಾರೆ.