ಸಕಲೇಶಪುರ: ಮೀಸಲು ಅರಣ್ಯ ಪ್ರದೇಶದಲ್ಲಿ ಒತ್ತುವರಿಯಾಗಿದ್ದ 40 ಎಕರೆ ಕಾಫಿ ತೋಟವನ್ನು ಸಕಲೇಶಪುರ ವಲಯ ಅರಣ್ಯ ಇಲಾಖೆ ತೆರವುಗೊಳಿಸಿದೆ.
ತಾಲೂಕಿನ ಹಾನುಬಾಳು ಹೋಬಳಿ ಮರಗಡಿ ಹಾಗೂ ಅಚ್ಚನಹಳ್ಳಿ ವ್ಯಾಪ್ತಿಯಲ್ಲಿ ಸೆಕ್ಷನ್ 4 ಹಾಗೂ 17ರ ಅಡಿಯಲ್ಲಿ ಬರುವ ಸರ್ವೆ ನಂಬರ್ 54ರಲ್ಲಿ ಸುಮಾರು 72.2 ಎಕರೆ ಮೀಸಲು ಅರಣ್ಯ ವ್ಯಾಪ್ತಿಗೆ ಘೋಷಣೆಯಾಗಿತ್ತು. ಇದರಲ್ಲಿ 38.20 ಕಾಫಿ ತೋಟ ಸನತ್ ಬಿನ್ ರಘುಪತಿ ಸುಮಾರು 40 ವರ್ಷಗಳಿಂದ ಒತ್ತುವರಿ ಮಾಡಿಕೊಂಡಿದ್ದರು. ಇಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಮಕ್ಷಮದಲ್ಲಿ ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಲಾಗಿದೆ.
ಈ ಘಟನೆಯಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಹತ್ತಾರು ದಶಕಗಳಿಂದ ಈ ಭಾಗದಲ್ಲಿ ಸಾಗುವಳಿ ಮಾಡುತ್ತಾ ಮನೆ ಕಟ್ಟಿ ಜೀವನ ನಡೆಸುತ್ತಿರುವವರಿಗೆ ನಡುಕ ಉಂಟಾಗಿದೆ. ರಾಜ್ಯದಲ್ಲಿ ಯಾವುದೆ ಸರ್ಕಾರ ಇಲ್ಲದ ಸಮಯದಲ್ಲಿ ಅರಣ್ಯ ಇಲಾಖೆ ದಬ್ಬಾಳಿಕೆಯಿಂದ ಅರಣ್ಯ ಒತ್ತುವರಿಯನ್ನು ತೆರವುಗೊಳಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ತೆರವು ಕಾರ್ಯಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಗ್ರಾಮಾಂತರ ಠಾಣಾ ಪೋಲೀಸರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ, ವಲಯ ಅರಣ್ಯ ಅಧಿಕಾರಿ ಶಿಲ್ಪ, ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಐ ಬಸವರಾಜ ಮುಂತಾದವರಿದ್ದರು.