ಹಾಸನ: ಕುವೆಂಪು ಅವರ ಒಂದಲ್ಲಾ ಒಂದು ವಿಚಾರಗಳಿಂದ ಪ್ರತಿಯೊಬ್ಬರು ಪ್ರೇರಿತರಾಗಿಯೇ ಇರುತ್ತೇವೆ. ಅವರ ಪುತ್ಥಳಿಯನ್ನು ಕಾಲೇಜಿನಲ್ಲಿ ಅನಾವರಣಗೊಳಿಸಿರುವುದು ಸಂತಸದ ವಿಷಯ ಎಂದು ಶಾಸಕ ಪ್ರೀತಂ ಜೆ ಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು-ಸ್ವಾಯತ್ತ, ಕಾಲೇಜಿನ ಆವರಣದಲ್ಲಿ ಕುವೆಂಪು ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಕುವೆಂಪು ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ಕುವೆಂಪು ಪುತ್ಥಳಿಯ ಸ್ಥಾಪನೆಗೆ ಶ್ರಮಿಸಿದ ಎಲ್ಲರನ್ನು ಸ್ಮರಿಸಿದರು. ಕುವೆಂಪು ಅವರು ನಡೆದ ಬಂದ ದಾರಿಯನ್ನು ಯುವಕರು ಅನುಸರಿಸಬೇಕಾಗಿದೆ. ಕುವೆಂಪು ಅವರನ್ನು ಪ್ರೇರಕ ಶಕ್ತಿಯನ್ನಾಗಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಜಿ.ಎಲ್. ಮುದ್ದೇಗೌಡ ಅವರು, ಕುವೆಂಪು ಅವರ ಸಾಹಿತ್ಯವನ್ನು ನಾನು ಓದಿಕೊಂಡಿದ್ದೇನೆ. ಅವರ ಪುಸ್ತಕಗಳನ್ನು ಯುವ ಪೀಳಿಗೆ ಓದಬೇಕು. ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳುವುದರ ಮೂಲಕ ಅವರ ಕೃತಿಗಳಾದ ನೆನಪಿನ ದೋಣಿ, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಇವುಗಳನ್ನು ನೆನೆದರು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರೊಬ್ಬ ಮಹಾನ್ಕವಿ ಎಂದು ಅಭಿಮಾನದ ಮಾತುಗಳನ್ನಾಡಿದರು.
ಪ್ರಾಂಶುಪಾಲರಾದ ಪ್ರೊ. ಟಿ.ಪಿ. ಪುಟ್ಟರಾಜು ಮಾತನಾಡಿ, ಕಾಲೇಜಿನ ಆವರಣದಲ್ಲಿ ಕುವೆಂಪು ಪ್ರತಿಮೆ ಅನಾವರಣ ಕನಸು ನನಸಾಗಿದೆ ಸಂತಸದ ವಿಚಾರ. ವಿದ್ಯಾರ್ಥಿಗಳು ಎಂದರೆ ಕುವೆಂಪು ಅವರಿಗೆ ಅಚ್ಚುಮೆಚ್ಚು. ಮಾನಸಗಂಗೋತ್ರಿ ಕುವೆಂಪು ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುವೆಂಪು ಅವರ ದೂರದೃಷ್ಟಿಯ ಕೇಂದ್ರವಾಗಿತ್ತು. ಅರ್ಥಪೂರ್ಣ ಸಂವೇದನೆಯನ್ನು ಹೊಂದಿದ್ದರು. ಅವರ ಒಂದೊಂದು ಕಾವ್ಯದಲ್ಲಿಯೂ ವೈಜ್ಞಾನಿಕ, ಪ್ರಾಕೃತಿಕ, ವೈಚಾರಿಕ ಪ್ರಜ್ಞೆ ಇತ್ತು ಎಂದು ಕುವೆಂಪು ಅವರು ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ಭತ್ತ ತುಂಬುವ ಚೀಲಗಳಾಗಬಾರದು, ಭತ್ತದ ಗದ್ದೆಗಳಾಗಬೇಕು ಎಂಬ ಮಾತುಗಳನ್ನು ಸ್ಮರಿಸಿದರು. ಇದೇ ಸಂದರ್ಭದಲ್ಲಿ ಶಾಸಕ ಪ್ರೀತಂ ಜೆ ಗೌಡ ಅವರು ಗಣ್ಯರೊಂದಿಗೆ ಕುವೆಂಪು ಪುತ್ಥಳಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲರಾದ ಪಾಲಾಕ್ಷ ಜಿ, ಮಹೇಂದ್ರಕುಮಾರ್, ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಮಲ್ಲೇಗೌಡ, ಪುಟ್ಟಸ್ವಾಮಿಗೌಡ ಅವರು ಹಾಜರಿದ್ದು, ಪತ್ರಾಂಕಿತ ವ್ಯವಸ್ಥಾಪಕ ಕೆ.ಟಿ. ಸತ್ಯಮೂರ್ತಿ, ಪರೀಕ್ಷಾ ನಿಯಂತ್ರಕ ಡಾ. ಕೆ.ಡಿ. ಮುರುಳೀಧರ್, ಎಲ್ಲಾ ವಿಭಾಗದ ಮುಖ್ಯಸ್ಥರು, ಅಧ್ಯಾಪಕರು, ಉಪನ್ಯಾಸಕರು, ಆಡಳಿತ ವರ್ಗದವರು ಉಪಸ್ಥಿತರಿದ್ದರು. ಶೈಕ್ಷಣಿಕ ಡೀನ್ ಡಾ. ಎಂ.ಬಿ. ಇರ್ಷಾದ್ ಕಾರ್ಯಕ್ರಮದಲ್ಲಿ ಎಲ್ಲರನ್ನು ಸ್ವಾಗತಿಸಿ, ವಂದಿಸಿದರು. ಗಾಯಕಿ ಬನುಮದತ್ ಪ್ರಾರ್ಥನೆ ಮಾಡಿದರು.